ರಾಜ್ಯದಲ್ಲಿ ತಲೆ ಎತ್ತಲಿವೆ ಮತ್ತಷ್ಟು ಹೊಸ ಬಾರ್, ವೈನ್ ಷಾಪ್ಗಳು
ಬೆಂಗಳೂರು : ಹೊಸ ವೈನ್ಷಾಪ್, ಬಾರ್ಗಳಿಗೆ ಪರವಾನಗಿ ನೀಡುವ ಬಗ್ಗೆ ರಾಜ್ಯ ಸರಕಾರ ಅಂತಿಮ ಹಂತದ ಪರಿಶೀಲನೆ ನಡೆಸುತ್ತಿದ್ದು, ಅತಿ ಶೀಘ್ರದಲ್ಲೇ ಹೊಸ ಬಾರ್, ವೈನ್ಷಾಪ್ಗಳಿಗೆ ಲೈಸೆನ್ಸ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ.
ಗುರುವಾರ ವಿಧಾನಮಂಡಳದ ಪ್ರಶ್ನೋತ್ತರ ವೇಳೆಯಲ್ಲಿ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರ ನೀಡುತ್ತಿದ್ದ ಮುಖ್ಯಮಂತ್ರಿಗಳು, ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗದ ದೃಷ್ಟಿಕೋನ ಹೊಂದಿರುವ ಸರಕಾರ ಈ ಸಂಬಂಧ ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದರು.
ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡುವುದು ಸರಕಾರದ ವಿವೇಚನೆಗೆ ಬಿಟ್ಟಿದ್ದು ಎಂದು ಹೈಕೋರ್ಟ್ ಹೇಳಿದೆ. ರಾಜ್ಯದ ಬೊಕ್ಕಸಕ್ಕೆ ಅಧಿಕ ಆದಾಯ ತರುವ ಮದ್ಯದಂಗಡಿಗಳ ಪರವಾನಗಿ ವಿಷಯದಲ್ಲಿ ರಾಜ್ಯ ಸರಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.
ರಾಜ್ಯದಲ್ಲಿ ಪ್ರಸ್ತುತ 3,738 ಮದ್ಯದಂಗಡಿ, 3,436 ಬಾರ್ಗಳಿಗೆ ಪರವಾನಗಿ ನೀಡಲಾಗಿದೆ. ಒಟ್ಟು 39 ಡಿಸ್ಟಲರಿಗಳು ಮದ್ಯ ತಯಾರಿಕೆಯಲ್ಲಿ ತೊಡಗಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 15, ಗ್ರಾಮಾಂತರ ಜಿಲ್ಲೆಯಲ್ಲಿ 3, ಬಳ್ಳಾರಿ, ಬೀದರ್, ಉಡುಪಿ, ದಕ್ಷಿಣ ಕನ್ನಡಗಳಲ್ಲಿ ತಲಾ 2, ಬೆಳಗಾವಿ, ವಿಜಾಪುರ, ಚಿತ್ರದುರ್ಗ, ದಾವಣಗೆರೆ, ಗುಲ್ಬರ್ಗಾ, ಕೊಪ್ಪಳ, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳಲ್ಲಿ ತಲಾ 1 ಡಿಸ್ಟಿಲರಿಗಳು ಕಾರ್ಯ ನಿರ್ವಹಿಸುತ್ತಿವೆ ಎಂದೂ ಅವರು ತಿಳಿಸಿದರು.
ಮದ್ಯದಂಗಡಿ ಹಾಗೂ ಬಾರ್ಗಳಿಗೆ ಪರವಾನಗಿ ನೀಡುವಾಗ ನಿರುದ್ಯೋಗಿ ಪದವೀಧರರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಮರಿ ತಿಬ್ಬೇಗೌಡ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...