ಮಂಡ್ಯ ಹೊರವಲಯದ ಏಳು ಮನೆಗಳಲ್ಲಿ ಸರಣಿ ದರೋಡೆ
ಮಂಡ್ಯ : ರಾಜ್ಯದ ಮೇಲೆ ಬರದ ಕಾರ್ಮೋಡ ಕವಿಯುತ್ತಿದ್ದಂತೆಯೇ ಕೊಲೆ, ಸುಲಿಗೆ, ದರೋಡೆಗಳು ಹೆಚ್ಚುತ್ತಿವೆ ಎನ್ನಿಸುತ್ತಿದೆ. ಮಂಡ್ಯ ನಗರದ ಹೊರ ವಲಯದಲ್ಲಿರುವ ರೇಷ್ಮೆ ಬಿತ್ತನೆ ಕೋಠಿಯ 7 ವಸತಿ ಗೃಹಗಳಲ್ಲಿ ಮಂಗಳವಾರ ರಾತ್ರಿ ಸರಣಿ ಡಕಾಯಿತಿ ನಡೆದಿದೆ.
ಈ ಸರಣಿ ಡಕಾಯಿತಿಯಲ್ಲಿ ಸುಮಾರು 2.5 ಲಕ್ಷ ರುಪಾಯಿ ಮೌಲ್ಯದ ಹಣ - ಒಡವೆ ದೋಚಲಾಗಿದೆ. ಇಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ರೇಷ್ಮೆ ಇಲಾಖೆ ಕಾವಲುಗಾರರಾದ ಕಾಳಯ್ಯ ಮತ್ತು ಶಂಕರಣ್ಣ ಎಂಬುವವರ ಮೇಲೆ ಡಕಾಯಿತರು ಹಲ್ಲೆ ನಡೆಸಿ, ಕೈಕಾಲು ಕಟ್ಟಿ ಶೌಚಾಲಯದಲ್ಲಿ ಕೂಡಿಹಾಕಿ, ಡಕಾಯಿತಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಡ್ಯ ಹೊರವಲಯದ ರೇಷ್ಮೆ ಬಿತ್ತನೆ ಕೋಠಿಗೆ ಹೊಂದಿಕೊಂಡಂತೆ 8 ವಾಸದ ಮನೆಗಳಿವೆ. ಈ ಎಂಟು ಮನೆಗಳ ಪೈಕಿ 7 ಮನೆಗಳಲ್ಲಿ ಸರಣಿ ಡಕಾಯಿತಿ ನಡೆದಿದೆ. ಬನಿಯನ್ ಹಾಗೂ ಚಡ್ಡಿ ಧರಿಸಿದ್ದ ಹತ್ತು ಹನ್ನೆರಡು ಜನರಿದ್ದ ಮುಸುಕುಧಾರಿ ಡಕಾಯಿತರ ತಂಡ ಈ ಕೃತ್ಯ ಎಸಗಿದೆ ಎಂದು ತಿಳಿದುಬಂದಿದೆ. ಡಕಾಯಿತರು ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಹಲ್ಲೆಗೊಳಗಾದವರ ಕುಟುಂಬದವರು ತಿಳಿಸಿದ್ದಾರೆ.
ಈ ಡಕಾಯಿತರು ಏಳೂ ಮನೆಯವರಿಗೆ ಪ್ರಾಣ ಬೆದರಿಕೆ ಹಾಕಿ, ಮಹಿಳೆಯ ತಾಳಿ, ಸರ, ಓಲೆ ಹಾಗೂ ಬೀರುವಿನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ. ಫಯಾಜ್ ಷರೀಫ್ ಅವರ ಮನೆಯಲ್ಲಿ ಮೊದಲು ದರೋಡೆ ಮಾಡಿದ ಗುಂಪು, ಮನೆಯವರನ್ನು ಕೊಠಡಿಯಾಂದರಲ್ಲಿ ಕೂಡಿಹಾಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರಕುಮಾರ ಪಾಂಡೆ, ಹೆಚ್ಚುವರಿ ಎಸ್ಪಿ. ರವಿಕುಮಾರ್ ಎಚ್. ನಾಯಕ್ ಭೇಟಿ ನೀಡಿದ್ದರು. ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.