ಕಾರ್ಗಿಲ್ ಯೋಧರ ಸ್ಮರಣಾರ್ಥ ರಾಷ್ಟ್ರಾದ್ಯಂತ ವಿಜಯ್ದಿವಸ್
ನವದೆಹಲಿ : ದೇಶವನ್ನು ರಕ್ಷಿಸಲು ಎರಡು ವರ್ಷಗಳ ಹಿಂದೆ ಕಾರ್ಗಿಲ್ ಯುದ್ಧದಲ್ಲಿ ತಮ್ಮ ಪ್ರಾಣವನ್ನೇ ತೆತ್ತ ವೀರ ಯೋಧರಿಗೆ ಗುರುವಾರ ರಾಷ್ಟ್ರಾದ್ಯಂತ ಗೌರವ ಅರ್ಪಿಸಲಾಯಿತು.
ಇಲ್ಲಿನ ಇಂಡಿಯಾ ಗೇಟ್ ಬಳಿ ಇರುವ ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ ಗುರುವಾರ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಕೃಷ್ಣಕಾಂತ್, ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ, ರಕ್ಷಣಾ ಸಚಿವ ಜಸ್ವಂತ್ ಸಿಂಗ್ ಸೇರಿದಂತೆ ಹಲವಾರು ಗಣ್ಯರು ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಅಪ್ರತಿಮ ಶೌರ್ಯ , ಸಾಹಸ ಮೆರೆದು ದೇಶಕ್ಕಾಗಿ ಬಲಿದಾನಗೈದ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛಗಳನ್ನರ್ಪಿಸಿ ತಮ್ಮ ಶ್ರದ್ಧಾಂಜಲಿ ಸಲ್ಲಿಸಿದರು.
ದೇಶ ಅತಿಕ್ರಮಣಕಾರರ ಧಾಳಿಯಿಂದ ವಿಮುಕ್ತವಾಗಿ ಎರಡು ವರ್ಷಗಳು ಕಳೆದ ಸಂದರ್ಭದಲ್ಲಿ ಗುರುವಾರ ರಾಷ್ಟ್ರಾದ್ಯಂತ ವಿಜಯ್ ದಿವಸ್ ಆಚರಿಸಲಾಯಿತು. ಅನಾರೋಗ್ಯದ ಕಾರಣ ರಾಷ್ಟ್ರಪತಿ ಕೆ.ಆರ್. ನಾರಾಯಣ್ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ.
ಸೇನಾ ಪಡೆಗಳ ವರಿಷ್ಠರು ಅಗಲಿದ ಯೋಧರಿಗೆ ತಮ್ಮ ಶ್ರದ್ಧಾಂಜಲಿ ಸಲ್ಲಿಸಿದರು. ಕೇಂದ್ರ ಸಚಿವ ಸಂಪುಟದ ಕೆಲವು ಸಚಿವರುಗಳು, ಹಿರಿಯ ಅಧಿಕಾರಿಗಳು ಸಹ ಈ ಸಂದರ್ಭದಲ್ಲಿ ಹಾಜರಿದ್ದರು.
ಬೆಂಗಳೂರು ವರದಿ : ಬೆಂಗಳೂರಿನಲ್ಲಿರುವ ವಿವಿಧ ಸೇನಾ ಕೇಂದ್ರಗಳಲ್ಲಿ ಕೂಡ ಗುರುವಾರ ವಿಜಯೋತ್ಸವ ದಿನ ಆಚರಿಸಲಾಯಿತು. ವೀರಯೋಧರ ಸ್ಮಾರಕ್ಕೆ ಪುಷ್ಪಗುಚ್ಛ ಅರ್ಪಿಸಿ ಅಗಲಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎ.ಎಸ್.ಸಿ. ಸೆಂಟರ್ನಲ್ಲಿ ನಡೆದ ಕಾರ್ಯಕ್ರಮದ ಬಳಿಕ ಸರ್ವಧರ್ಮ ಪ್ರಾರ್ಥನೆಯೂ ನಡೆಯಿತು.
ಮುಖಪುಟ / ಇವತ್ತು... ಈ ಹೊತ್ತು...