ಕರ್ನಾಟಕ ವಿಧಾನಪರಿಷತ್ತಿನ 1 ಸ್ಥಾನಕ್ಕೆ ಆ.24ರಂದು ಚುನಾವಣೆ
ನವದೆಹಲಿ : ಕರ್ನಾಟಕ ಹಾಗೂ ಮಹಾರಾಷ್ಟ್ರ ವಿಧಾನಪರಿಷತ್ತಿನಲ್ಲಿ ತೆರವಾಗಿರುವ ತಲಾ ಒಂದು ಸ್ಥಾನಗಳಿಗೆ ಆಗಸ್ಟ್ 24ರಂದು ಚುನಾವಣೆ ನಡೆಯಲಿದೆ. ಕೇಂದ್ರ ಚುನಾವಣೆ ಆಯೋಗವು ಮಂಗಳವಾರ ಈ ಸಂಬಂಧ ಪ್ರಕಟಣೆಯನ್ನು ಹೊರಡಿಸಿದೆ.
ಬೆಂಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸಿ. ನಾರಾಯಣ ರೆಡ್ಡಿ ಅವರ ನಿಧನದಿಂದ ಕರ್ನಾಟಕದ ವಿಧಾನ ಪರಿಷತ್ತಿನಲ್ಲಿ ಒಂದು ಸ್ಥಾನ ತೆರವಾಗಿದ್ದರೆ, ಮಹಾರಾಷ್ಟ್ರದ ಹಾಲಿ ಪರಿಷತ್ ಸದಸ್ಯ ಪಾಟೀಲ್ ಅನಿಲ್ ತ್ರಿಂಬಕದಾಸ್ ಅವರ ಅವಧಿ ಆಗಸ್ಟ್ 29ಕ್ಕೆ ಕೊನೆಗೊಳ್ಳಲಿದೆ.
ಆಗಸ್ಟ್ 24ರ ಚುನಾವಣೆಯಲ್ಲಿ ಜಯಗಳಿಸುವ ಸದಸ್ಯರ ಅವಧಿ 2004ರ ಜನವರಿ 5ನೇ ತಾರೀಖಿನವರೆಗೆ ಇರುತ್ತದೆ ಎಂದು ಆಯೋಗದ ಪ್ರಕಟಣೆ ಹೇಳಿದೆ. ಈ ಚುನಾವಣೆಯ ವೇಳಾಪಟ್ಟಿಯ ರೀತ್ಯ ಜುಲೈ 30ರಂದು ಚುನಾವಣೆ ಅಧಿಸೂಚನೆ ಹೊರಬೀಳಲಿದೆ.
ನಾಮಪತ್ರ ಸಲ್ಲಿಸಲು ಆಗಸ್ಟ್ 6 ಕೊನೆ ದಿನ. ನಾಮಪತ್ರ ಪರಿಶೀಲನೆ ಆಗಸ್ಟ್ 7ರಂದು, ನಾಮಪತ್ರ ವಾಪಸು ಪಡೆಯಲು ಕೊನೆ ದಿನ ಆಗಸ್ಟ್ 9. ಆಗಸ್ಟ್ 24ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ. 26ರಂದು ಮತ ಎಣಿಕೆ. ಆಗಸ್ಟ್ 29ಕ್ಕೆ ಚುನಾವಣೆ ಪ್ರಕ್ರಿಯೆ ಸಂಪೂರ್ಣ ಮುಗಿಯುತ್ತದೆ ಎಂದು ಆಯೋಗ ತಿಳಿಸಿದೆ.
(ಯು.ಎನ್.ಐ)