ಎಸ್ಸೆಂ ಕೃಷ್ಣ ಸರಕಾರಕ್ಕೆಕಾಂಗ್ರೆಸ್ ವರಿಷ್ಠ ಸಮಿತಿಯ ಶಹಬಾಸ್ಗಿರಿ
ಬೆಂಗಳೂರು : ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಸರಕಾರದ ಸಾಧನೆಗಳನ್ನು ಎರಡನೇ ಬಾರಿ ಪರಾಮರ್ಶಿಸಿದ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಉನ್ನತ ಸಮಿತಿ ಸರಕಾರದ ಸಾಧನೆಯ ಬಗ್ಗೆ ಸಂಪೂರ್ಣ ತೃಪ್ತಿ ವ್ಯಕ್ತಪಡಿಸಿದೆ.
ಬಡತನ ನಿರ್ಮೂಲನೆ, ಬಡವರಿಗೆ ಮನೆಗಳನ್ನು ಕಟ್ಟಿಕೊಡುವುದು, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಯೋಜನೆ ಸೇರಿದಂತೆ ವಿವಿಧ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಸರಕಾರ ಯಶಸ್ವಿಯಾಗಿದೆ ಎಂದು ಪಕ್ಷದ ವರಿಷ್ಠ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ.
ರಾಜ್ಯ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಂಬಿಕಾ ಸೋನಿ, ಕೇಂದ್ರದ ಮಾಜಿ ಹಣಕಾಸು ಸಚಿವ ಡಾ. ಮನಮೋಹನ್ ಸಿಂಗ್ , ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇದ್ಪ್ರಕಾಶ್ ಗೋಯಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಅವರು ಭಾಗವಹಿಸಿದ್ದ ಪರಾಮರ್ಶೆ ಸಭೆ ಸುಮಾರು ಎರಡು ಗಂಟೆಗಳವರೆಗೆ ಸಾಗಿತು.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂಬಿಕಾ ಸೋನಿ, ಕೃಷ್ಣ ಸರಕಾರದ ಸಾಧನೆ ಸಮನ್ವಯ ಸಮಿತಿಗೆ ತೃಪ್ತಿ ತಂದಿರುವುದಾಗಿ ಹೇಳಿದರು. ಕೃಷ್ಣ ಸರಕಾರ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದೆ. ವಿದ್ಯುತ್ ಮತ್ತು ಕೈಗಾರಿಕಾ ಕ್ಷೇತ್ರಗಳ ಪ್ರಗತಿಗೆ ಉತ್ತಮ ಅವಕಾಶ ಕಲ್ಪಿಸಿ ಬಂಡವಾಳ ಹೂಡಿಕೆಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಹಿಂದಕ್ಕೆ ಹಾಕಿದ್ದಾರೆ ಎಂದರು.
ಈ ಪರಿಶೀಲನೆ ಸಂಪೂರ್ಣವಾಗಿ ಕಾಂಗ್ರೆಸ್ನ ಆಂತರಿಕ ವಿಷಯ ಎಂದ ಅಂಬಿಕಾ ಮುಂದಿನ ಹತ್ತು ದಿನಗಳೊಳಗಾಗಿ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಲಾಗುವುದು ಎಂದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಕೃಷ್ಣ
ಗಾರುಡಿ