ಲತಾ, ಲಕ್ಕಿ, ನಸ್ರತ್, ಅದ್ನಾನ್...ಎಲ್ಲಾ ಒಂದೇ ಅಲ್ಲವೇ?
ಕರಾಚಿ : ಅಟಲ್- ಮುಷರ್ರಫ್ ಶೃಂಗಸಭೆ ಹತ್ತಿರಾಗುತ್ತಿರುವ ಈ ಹೊತ್ತಲ್ಲಿ ಭಾರತ- ಪಾಕ್ ನಡುವಣ ದ್ವಿಪಕ್ಷೀಯ ಸಂಬಂಧದ ಸ್ವರೂಪದ ವಿಶ್ಲೇಷಣೆ ನಡೆಯುತ್ತಿದೆ. ಕ್ರೀಡೆ, ಕಲೆ, ಸಂಗೀತ, ವಾಣಿಜ್ಯ ಹೀಗೆ ಎಲ್ಲಾ ಕ್ಷೇತ್ರಗಳ ಸಂಬಂಧಕ್ಕೆ ಹೊಸ ತಿರುವುದು ಕೊಡಬಲ್ಲ ಶೃಂಗಸಭೆಗೆ ಉಭಯ ರಾಷ್ಟ್ರಗಳ ಅನೇಕ ಪ್ರಮುಖರು ಇದಿರು ನೋಡುತ್ತಿರುವ ನಡುವೆಯೇ ಸಂಬಂಧ ಸೊಗಸಾಗಿರುವ ಕೆಲ ಘಟನೆಗಳು ಪುಂಖಾನುಪುಂಖ ತೆರೆದುಕೊಳ್ಳುತ್ತಿವೆ.
ಬಾಲಿವುಡ್ನ ಹಾಸ್ಯನಟ ಮೆಹ್ಮೂದ್ ಪುತ್ರ ಲಕ್ಕಿ ಆಲಿ ಹುಟ್ಟಿದ್ದು ಬೆಂಗಳೂರಲ್ಲಿ. ತಮ್ಮ ನಿಧಾನಗತಿಯ ಸಂಗೀತದಿಂದ ಸಹೃದಯರ ಮನ ಗೆದ್ದವರು. ಜನಪ್ರಿಯತೆಯ ದೃಷ್ಟಿಯಿಂದ ಅಪ್ಪನನ್ನೂ ಮೀರಿಸಿದವರು. ಕಳೆದ ವಾರಾಂತ್ಯದಲ್ಲಿ ಕರಾಚಿಯಲ್ಲಿ ಇವರ ಸಂಗೀತ ಸಂಜೆ ಏರ್ಪಾಟಾಗಿತ್ತು. ಸಂಪ್ರದಾಯ ಶರಣ ಹೆಂಗಸರೂ ಲಕ್ಕಿ ಹಾಡಿಗೆ ದನಿಗೂಡಿಸಿದರು. ಸಾಮಾನ್ಯವಾಗಿ ಬುರ್ಖಾದಿಂದ ಮುಖದೋರದಿರುವ ಹೆಂಗಳೆಯರೂ ಕೆಲ ಕ್ಷಣ ಸಂಪ್ರದಾಯ ಮುರಿದರು. ಇಲ್ಲಿ ಹಾಡುತ್ತಿರುವುದು ಭಾರತೀಯ, ಸಂಗೀತ ಕೇಳೋದು ಬೇಡ ಎಂಬ ಧೋರಣೆ ಯಾರೂ ತಳೆಯಲಿಲ್ಲ. ಕೆಲವರಂತೂ ಸಂಗೀತಕ್ಕೆಂಥಾ ದ್ವಿಪಕ್ಷೀಯ ಸಂಬಂಧ ಎಂದರು.
ಸ್ಟಾರ್ ಟಿವಿಗೆ ಪುಟ್ಟದೊಂದು ಸಂದರ್ಶನ ಕೊಟ್ಟ ಲಕ್ಕಿ ಆಡಿದ ಮಾತುಗಳು ಇಂತಿವೆ...
ಭಾರತ ಹಾಗೂ ಪಾಕ್ನ ಸಹೃದಯರು ನನ್ನ ಹಾಡುಗಳನ್ನು ಒಂದೇ ರೀತಿ ಸ್ವೀಕರಿಸಿದರು. ಭಾಷೆ, ನೋಟ, ಸ್ಪಂದನೆ, ಸಾಹಿತ್ಯ ಮರೆತಾಗ ಅಥವಾ ತಪ್ಪು ಉಚ್ಚರಿಸಿದಾಗ ನನ್ನನ್ನು ಎಚ್ಚರಿಸುವುದು... ಎರಡೂ ದೇಶಗಳ ಅಭಿಮಾನಿಗಳು ಮಾಡಿದ್ದಾರೆ. ಹಿಂದೆ ಭಾರತ- ಪಾಕಿಸ್ತಾನ ಒಂದೇ ಆಗಿದ್ದವು. ಈಗ ಎರಡಾಗಿವೆ. ಶಾಂತಿ ಮತ್ತು ಅಭಿವೃದ್ಧಿಯ ದೃಷ್ಟಿಯಲ್ಲಿ ನಾವು ಒಟ್ಟಾಗಿ ಹೆಜ್ಜೆ ಹಾಕಬೇಕು. ಅಲ್ಲಾಹನ ಕೃಪೆಯಿಂದ ಹಾಗಾಗಲಿ.
ನಮ್ಮವರೇ ಎಲ್ಲಾ ನಮ್ಮವರೇ... ! : ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಪಿಯಾನೋ ನುಡಿಸುವ ಅದ್ನಾನ್ ಸಮಿ ಎಂಬ ಪಾಕ್ ಸಂಜಾತ ಈ ಹೊತ್ತು ಭಾರತದಲ್ಲೂ ಸೆನ್ಸೇಷನ್. ಥೋಡಿ ಸೀ ತೂ ಲಿಫ್ಟ್ ಕರಾದೇ ಎಂಬ ಈತನ ಹಾಡನ್ನು ಬೆಂಗಳೂರಿನ ಯುವಕರೇ ಗುನುಗುನಿಸುತ್ತಿದ್ದಾರೆ. ಅದ್ನಾನ್ ಈಗ ಭಾರತದ ಪ್ರಜಾಪ್ರಭುತ್ವ ಪಡೆಯಲು ಬಯಸಿದ್ದಾರೆ. ಗುಲಾಂ ಅಲಿ, ನಸ್ರತ್ ಫತೇ ಅಲಿ ಖಾನ್, ರೇಷ್ಮಾ ಅವರು ಪಾಕಿಸ್ತಾನದವರಾದರೂ, ಅವರ ಕೆಸೆಟ್ಟುಗಳು ಭಾರತದ ಮಾರುಕಟ್ಟೆಯಲ್ಲಿ ಗೋಬಿ ಮಂಚೂರಿಗಿಂತ ಹೆಚ್ಚು ಬಿಕರಿಯಾಗಿವೆ. ಜುನೂನ್ ಎಂಬ ಪಾಪ್ ಸಮೂಹವೂ ಇದಕ್ಕೆ ಹೊರತಲ್ಲ.
ಲಕ್ಕಿ ಕಾರ್ಯಕ್ರಮ ಆಯೋಜಿಸಿದ್ದ ಉಸ್ಮಾನ್ ಪಿರ್ಝಾದಾ ಹೇಳುತ್ತಾರೆ- ಕಲಾಕಾರರು, ಸಂಗೀತಕಾರರು ಹಾಗೂ ಆಟಗಾರರು ಎರಡು ದೇಶಗಳ ಜನರನ್ನು ಹತ್ತಿರ ತರಲು ಸಹಕಾರ ನೀಡಬೇಕು.
ಹಾಡಿಗೆ ಕಟ್ಟೆ ಹಾಕಲಾಗದು : ಲತಾ ಮಂಗೇಶ್ಕರ್ಗೆ ಒಂದು ಕಾಲದಲ್ಲಿ ಬೆನ್ನು ತಟ್ಟಿದ್ದ ಗಾಯಕಿ ನೂರ್ ಜಹಾನ್, ಭಾರತ- ಪಾಕ್ ವಿಭಜನೆಯ ನಂತರ ಪಾಕ್ನವರಾಗಿಬಿಟ್ಟರು. ಮೊನ್ನೆ ಆಕೆಯ ಮಗಳು ರಿkುಲೆ ಹ್ಯುಮಾ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾಗ, ಪಾಕಿಸ್ತಾನದ ಕೆಲವು ಪತ್ರಕರ್ತರು ಹಾಗೂ ಸಹೃದಯರು ಭಾರತದ ಹಾಡು ಕೂಡದು ಎಂದು ಸೊಲ್ಲೆತ್ತಿದರು. ಅದಕ್ಕೆ ಸೊಪ್ಪು ಹಾಕದ ರಿkುಲೆ ಭಾರತದ ಹಾಡನ್ನು ಹಾಡಿಯೇ ತೀರಿದರು. ಕಟಕಿಯಾಡಿದವರು ಕಂಬಿ ಕಿತ್ತರೆ, ಭಾರತದ ಹಾಡಿಗೆ ತಲೆದೂಗಿದ ಮಂದಿ ಅದೆಷ್ಟೋ. ಆ ಕ್ಷಣಕ್ಕಾದರೂ ಭಾರತ- ಪಾಕಿಸ್ತಾನದ ಕಂದರವನ್ನು ಮರೆತ ಈ ಸಹೃದಯರು ಸಾಮರಸ್ಯದ ಬಿಂಬ ಅಲ್ಲವೇ?
(ಇನ್ಫೋ ವಾರ್ತೆ)
What do you think about this article
ಮುಖಪುಟ / ಇವತ್ತು... ಈ ಹೊತ್ತು...