ಭಾರತದಲ್ಲಿ ಮೊಟ್ಟ ಮೊದಲ ‘ಸಲಿಂಗರತಿ ಬಹಿರಂಗ ಉಪನ್ಯಾಸ’
ಬೆಂಗಳೂರು : ಭಾರತದಲ್ಲಿ ಮೊದಲನೆಯದು ಎನ್ನಲಾದ ಸಲಿಂಗರತಿಗಳು ನೇರವಾಗಿ ಭಾಗವಹಿಸಿ ಮಾತನಾಡಲು ಅವಕಾಶವಿರುವ ‘ಸಲಿಂಗರತಿ ಕುರಿತ ಸಾರ್ವಜನಿಕ ಉಪನ್ಯಾಸ ಕಾರ್ಯಕ್ರಮ’ ಜುಲೈ 1 ರಿಂದ ನಡೆಯಲಿದೆ. ಲೈಂಗಿಕ ಶೋಷಿತರ ಹಕ್ಕುಗಳ ಒಕ್ಕೂಟ ಈ ಕಾರ್ಯಕ್ರಮವನ್ನು ಏರ್ಪಡಿಸಿದೆ.
ರಾಜ್ಯದ ನಾಗರಿಕ ಹಕ್ಕುಗಳ ಒಕ್ಕೂಟದ ಅಧ್ಯಕ್ಷ ಪ್ರೊ. ಹಸನ್ ಮನ್ಸೂರ್ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಅಮ್ನೆಸ್ಟಿ ಅಂತರರಾಷ್ಟ್ರೀಯ ಸಂಸ್ಥೆಯ ಸಂಯೋಜಕ ವಿಜಯ ನಾಗರಾಜ್ ಸಲಿಂಗರತಿಯಲ್ಲಿ ತೊಡಗಿರುವವರನ್ನು ಹಾಗೂ ಆ ಬಗ್ಗೆ ಮಾತನಾಡುವವರನ್ನು ದೂಷಿಸುವುದು ಸಲ್ಲದು ಎಂದರು.
ಲೈಂಗಿಕ ಶೋಷಣೆಯ ಕುರಿತು ಅಮ್ನೆಸ್ಟಿ ಸಂಸ್ಥೆ ವರದಿಯಾಂದನ್ನು ರಚಿಸಿದ್ದು- ಈ ವರದಿ ವಿಶ್ವದ ಇತರೆಡೆಗಳಲ್ಲಿ ಬಿಡುಗಡೆಯಾಗಿದೆ, ಸಂಸ್ಥೆಯ ಸದಸ್ಯರು ವರದಿಯ ಕುರಿತ ಪ್ರಚಾರಾಂದೋಲನ ಆರಂಭಿಸಿದ್ದಾರೆ ಎಂದು ನಾಗರಾಜ್ ಹೇಳಿದರು.
ಸಲಿಂಗಕಾಮಿಗಳ ಪರವಾಗಿ ಕೆಲವು ಶಿಫಾರಸ್ಸುಗಳನ್ನು ಅಮ್ನೆಸ್ಟಿ ಸರ್ಕಾರಕ್ಕೆ ಸಲ್ಲಿಸಿದೆ. ಅವುಗಳಲ್ಲಿ ಪ್ರಮುಖವಾದವು-
- ಸಲಿಂಗಕಾಮಿಗಳ ಹಕ್ಕುಗಳನ್ನು ಇತರೆ ಮಾನವರ ಹಕ್ಕುಗಳಂತೆ ತಿಳಿಯಬೇಕು.
- ಸಲಿಂಗರತಿ ಅಪರಾಧ ಎನ್ನುವ ಕಾನೂನನ್ನು ರದ್ದುಪಡಿಸುವುದು.
- ಸಲಿಂಗಕಾಮಿಗಳ ಮೇಲೆ ದೌರ್ಜನ್ಯ ಎಸಗಿದವರನ್ನು ಶಿಕ್ಷಿಸುವುದು.
- ಬಲವಂತದ ವೈದ್ಯಕೀಯ ಉಪಚಾರವನ್ನು ನಿಷೇಧಿಸುವುದು.