‘ನಿಮ್ಮ ಭಾಷೆಯನ್ನು ನೀವೇ ಪ್ರೀತಿಸಬೇಕು’
ಬೆಂಗಳೂರು : ಪ್ರಾದೇಶಿಕ ಭಾಷೆಗಳನ್ನು ಪೋಷಿಸಿ, ಬೆಳೆಸಿಕೊಂಡು ಬರಲು ಆಯಾ ಭಾಷೆಯನ್ನು ಬಳಸುವ ಜನರು ಕಾಳಜಿ ವಹಿಸಬೇಕು ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಮಲಯಾಳಂ ಸಾಹಿತಿ ಎಂ. ಟಿ. ವಾಸುದೇವನ್ ನಾಯರ್ ಅಭಿಪ್ರಾಯ ಪಟ್ಟಿದ್ದಾರೆ.
ಅವರು, ಸೋಮವಾರ ಕರ್ನಾಟಕ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಸಾಮರಸ್ಯ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು. ಭಾಷೆಯಾಂದರ ಪ್ರಾಥಮಿಕ ಮೌಲ್ಯವನ್ನು ಅದರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಶ್ರೀಮಂತಿಕೆಯನ್ನು ನೋಡಿ ನಿರ್ಧರಿಸಬೇಕು ಎಂದು ಅವರು ಹೇಳಿದರು.
ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ತುಳು ಭಾಷೆಯನ್ನು ಸೇರಿಸುವ ಬಹುಕಾಲದ ಬೇಡಿಕೆಯ ಕುರಿತು ಮಾತನಾಡಿದ ನಾಯರ್, ಭಾಷೆಯ ರಕ್ಷಣೆ ಮತ್ತು ಅಭಿವೃದ್ಧಿ ಯ ಹೊಣೆ ಆ ಭಾಷೆಯನ್ನು ಬಳಸುವ ಮಂದಿಯ ಮೇಲಿರುತ್ತದೆ. ಭಾಷೆಯ ಸಮಗ್ರ ಬೆಳವಣಿಗೆಗೆ ಹೆಗಲು ಕೊಡುವುದು ನ್ಯಾಷನಲ್ ಬುಕ್ ಟ್ರಸ್ಟ್ ಅಥವಾ ಕೇಂದ್ರ ಸಾಹಿತ್ಯ ಅಕಾಡೆಮಿಯಂತಹ ಯಾವುದೇ ಸಂಘಟನೆಯಿಂದ ಸಾಧ್ಯವಾಗುವುದಿಲ್ಲ . ತನ್ನ ಮಾತೃ ಭಾಷೆಯ ಬಗ್ಗೆ ವ್ಯಕ್ತಿಗೆ ಹೆಮ್ಮೆ ಇರಬೇಕು ಎಂದು ಅವರು ಹೇಳಿದರು.
ಜನತೆಯ ಅಕ್ಕರೆ ಹೊಂದಿರುವ ಭಾಷೆ ತಂತಾನೇ ಬೆಳೆಯುತ್ತದೆ
ಭಾಷಾ ಬೆಳವಣಿಗೆ ಹಾಗೂ ಭಾಷಾಭಿಮಾನದ ಬಗ್ಗೆ ನಾಯರ್ ಮಂಡಿಸಿದ ವಿಚಾರಗಳು ಪರೋಕ್ಷವಾಗಿ ಕನ್ನಡಿಗರನ್ನು ಉದ್ದೇಶಿದಂತೆ ಇದ್ದುದು ಅವರ ಭಾಷಣದ ವೈಶಿಷ್ಟ್ಯ. ಭಾಷೆಯ ಬಗ್ಗೆ ಅವರು ವ್ಯಕ್ತಪಡಿಸಿದ ಮುಖ್ಯಾಂಶಗಳು-
- ಭಾಷೆಯನ್ನು ಮಾತನಾಡುವ ಜನಾಂಗಕ್ಕೆ ತಮ್ಮ ಭಾಷೆಯ ಮೇಲೆ ಅಕ್ಕರೆ ಇದ್ದರೆ ತನ್ನಿಂದ ತಾನಾಗಿಯೇ ಆ ಭಾಷೆ ಬೆಳೆಯುತ್ತದೆ ಮತ್ತು ಆ ಭಾಷೆಗೆ ಮಾನ್ಯತೆ ದೊರೆಯುತ್ತದೆ.
- ಭಾಷೆ ಜನರನ್ನು ಒಗ್ಗೂಡಿಸಲೆಂದೇ ಹುಟ್ಟಿಕೊಂಡಿದೆ ಎಂಬುದನ್ನು ನಾವು ಮರೆಯಬಾರದು
- ಭಾಷೆಯ ಕಾರಣಕ್ಕಾಗಿಯೇ ಜಗಳಗಳನ್ನು ಶುರುಮಾಡಿಕೊಳ್ಳುವುದು ತರವಲ್ಲ .
- ಭಾಷಾಭಿವೃದ್ಧಿಗೆ ರಾಜಕೀಯವನ್ನು ಅವಲಂಬಿಸುವುದು ಸಲ್ಲದು.
ಈ ವರ್ಷ ಕೇರಳ ಸಾಹಿತ್ಯ ಅಕಾಡೆಮಿಯು ಕನ್ನಡದ ಜ್ಞಾನ ಪೀಠ ಪ್ರಶಸ್ತಿ ವಿಜೇತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಶತಾಬ್ಧಿ ಕಾರ್ಯಕ್ರಮವನ್ನು ಆಯೋಜಿಸಿರುವ ವಿಷಯವನ್ನೂ ಅವರು ತಿಳಿಸಿದರು.
(ಯುಎನ್ಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...