ಕೇಂದ್ರದ ಯೋಜನೆ ಜಾರಿ: ಸೋಂಬೇರಿ ಅಧಿಕಾರಿಗಳ ವಿರುದ್ಧ ಕ್ರಮ
ಬೆಂಗಳೂರು : ಕೇಂದ್ರ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾಲವ್ಯಯ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಎಚ್ಚರಿಸಿದ್ದಾರೆ.
ಕೇಂದ್ರದ ಯೋಜನೆಗಳನ್ನು ಜಾರಿಗೊಳಿಸಲು ಅನುವಾಗುವಂತೆ ಅಧಿಕಾರಿಗಳು ಕಾಲವ್ಯಯ ಮಾಡದೆ ಪ್ರಸ್ತಾವನೆಗಳನ್ನು ಸಿದ್ಧಪಡಿಸಬೇಕು. ಕಾಲವ್ಯಯ ಮಾಡಿದಲ್ಲಿ ಆಯಾ ಅಧಿಕಾರಿಗಳನ್ನೇ ಕರ್ತವ ಲೋಪಕ್ಕೆ ಹೊಣೆಗಾರರನ್ನಾಗಿಸಲಾಗುವುದು ಎಂದು ಕೃಷ್ಣ ಹೇಳಿದರು. ಕೋರಮಂಗಲದಲ್ಲಿನ ಕೇಂದ್ರೀಯ ಸದನದ ಎನ್ಪಿಸಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಡಿಯೋ ಕಾನ್ಫರೆನ್ಸ್ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗವಹಿಸಿದ್ದರು.
ಕೇಂದ್ರದ ಯೋಜನೆಗಳನ್ನು ಬಳಸಿಕೊಳ್ಳುವಲ್ಲಿ ಉಳಿದ ರಾಜ್ಯಗಳು ಯಶಸ್ವಿಯಾಗಿವೆ. ಇನ್ನು ಮುಂದಾದರೂ ಕೇಂದ್ರದ ಯೋಜನೆಗಳ ಸಿಂಹಪಾಲನ್ನು ಪಡೆಯುವಲ್ಲಿ ರಾಜ್ಯದ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಗೆ ಮುನ್ನ ನಡೆದ ವಿಡಿಯೋ ಕಾನ್ಫರೆನ್ಸ್ನಲ್ಲಿ ವೆಂಕಯ್ಯ ನಾಯ್ಡು ಅವರೊಂದಿಗೆ ಕೃಷ್ಣ ನೇರ ಸಂವಾದ ನಡೆಸಿದರು. ಗ್ರಾಮಸಡಕ್ ಯೋಜನೆಯನ್ನು ಪ್ರಧಾನಿ ಅನುಷ್ಠಾನಗೊಳಿಸುವಲ್ಲಿ , ಸಂಸದರ ವಿಶ್ವಾಸ ಪಡೆಯುವಂತೆ ವೆಂಕಯ್ಯನಾಯ್ಡು ಕೃಷ್ಣ ಅವರಿಗೆ ಸೂಚಿಸಿದರು.
(ಇನ್ಫೋ ವಾರ್ತೆ)