ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಬಳಿಯ ರಾಜಘಟ್ಟದಲ್ಲಿ ಬೌದ್ಧಅವಶೇಷಗಳ ಪತ್ತೆ

By Staff
|
Google Oneindia Kannada News

*ಇಮ್ರಾನ್‌ ಖುರೇಶಿ ಬೆಂಗಳೂರು : ತಾಲಿಬಾನ್‌ನಲ್ಲಿ 2 ಸಾವಿರ ವರ್ಷಗಳ ಹಿಂದಿನ ಬುದ್ಧ ಪ್ರತಿಮೆಗಳು ನಾಶವಾದರೆ, ನಗರದಿಂದ 40 ಕಿಮೀ ಉತ್ತರಕ್ಕಿರುವ ರಾಜಘಟ್ಟದಲ್ಲಿ ಬೌದ್ಧ ಧರ್ಮಕ್ಕೆ ಸೇರಿದ ಸುಮಾರು 2000 ವರ್ಷ ಕ್ಕೂ ಹಿಂದಿನ ಪಳೆಯುಳಿಕೆಗಳು ಪತ್ತೆಯಾಗಿವೆ. ಅವುಗಳ ಹಿನ್ನೆಲೆಯ ಬಗ್ಗೆ ಮೈಸೂರು ವಿಶ್ವ ವಿದ್ಯಾಲಯದಲ್ಲಿನ ಪುರಾತತ್ವ ಶಾಸ್ತ್ರ ಪರಿಣತರು ಅಧ್ಯಯನ ಮುಂದುವರೆಸಿದ್ದಾರೆ.

ಪೇಪರ್‌ ವೈಟ್‌ ಗಾತ್ರದ ನೂರಾರು ಪುಟ್ಟ ಪುಟ್ಟ ಸ್ತೂಪಗಳು, ಕುದುರೆಯಾಕೃತಿಯ ಕಟ್ಟಡಗಳು, ಮಡಿಕೆಗಳು ಮತ್ತು ಪ್ರಾರ್ಥನಾ ಮಂದಿರದ ಇಟ್ಟಿಗೆಗಳು ಇತ್ತೀಚಿನ ಉತ್ಖನನದಲ್ಲಿ ಪತ್ತೆಯಾಗಿವೆ. ಇವು ಒಂದು ಸಾಮ್ರಾಜ್ಯದ ಅವಶೇಷಗಳಲ್ಲ. ಒಂದು ಹಳ್ಳಿ ವಾಸವಾಗಿದ್ದ ಕುರುಹುಗಳು, ಅದೇನೇ ಆದರೂ ಸರಿಯಾದ ಅಧ್ಯಯನದ ನಂತರವಷ್ಟೇ ಈ ಅವಶೇಷಗಳ ವೈಶಿಷ್ಟ್ಯದ ಬಗ್ಗೆ ನಾವು ಹೇಳಬಲ್ಲೆವು ಎಂದು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರೊ. ಎಂ. ಎಸ್‌ ಕೃಷ್ಣ ಮೂರ್ತಿ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ಕೃಷ್ಣ ಮೂರ್ತಿ ಅವರ ನೇತೃತ್ವದ ತಂಡ ಈ ಪುಟ್ಟ ಹಳ್ಳಿಯಲ್ಲಿ ನಡೆಸಿದ ಭೂಶೋಧನಾ ಪ್ರಕ್ರಿಯೆ ಒಂದು ತಿಂಗಳ ಹಿಂದೆಯೇ ಮುಗಿದಿತ್ತು. ಅಧ್ಯಯನ ಕಾರ್ಯ ಪೂರ್ಣವಾಗುವುದಕ್ಕೆ ಇನ್ನೂ ಒಂದು ವಾರ ಕಾಲಾವಕಾಶ ಬೇಕು. ನಂತರ ಅವಶೇಷಗಳ ಹಿನ್ನೆಲೆಯನ್ನು ಹೆಚ್ಚಿನ ವಿವರಗಳ ಬಗ್ಗೆ ಹೇಳಬಹುದು ಎಂದು ಅವರು ಹೇಳುತ್ತಾರೆ. ಆದರೆ ಭೂಶೋಧನೆಗೆ ಸಹಕರಿಸಿದ ಗ್ರಾಮಸ್ಥರು ಇದು ಬೌದ್ಧ ದೊರೆ ನರೇಂದ್ರ ಮತ್ತು ಆತನ ಮಗ ಸಾರಂಗಧಾಮನ ಕತೆಗೆ ಸಂಬಂಧಿಸಿದ್ದೆಂದು ಮಾತಾಡಿಕೊಳ್ಳುತ್ತಿದ್ದಾರೆ.

ಗ್ರಾಮಸ್ಥರು ಹೇಳುವ ಕಥೆ ಸ್ವಾರಸ್ಯಕರವಾಗಿದೆ-

ರಾಜ ನರೇಂದ್ರ ತನ್ನ ಮಗನಿಗಾಗಿ ಹುಡುಗಿಯಾಂದನ್ನು ಹುಡುಕುತ್ತಾ ಹೊರಟು, ಚಿತ್ರಾಂಗಿಯೆನ್ನುವ ಹೆಣ್ಣಿನಿಂದ ಆಕರ್ಷಿತನಾಗಿ ತಾನೇ ಮದುವೆಯಾಗ ಬಯಸುತ್ತಾನೆ . ಆದರೆ ಸಾರಂಗಧಾಮನನ್ನು ಇಚ್ಚಿಸುವ ಚಿತ್ರಾಂಗಿ ಆತನನ್ನು ಹೊಂದಲು ಪ್ರಯತ್ನಿಸಿ ವಿಫಲಳಾಗುತ್ತಾಳೆ. ಕೊನೆಗೆ ಸಾರಂಗಧಾಮನ ವಿರುದ್ಧ ದ್ವೇಷ ಭಾವನೆ ತಳೆಯುವ ಚಿತ್ರಾಂಗಿ, ಆತ ತನ್ನ ಶೀಲ ಹರಣ ಮಾಡಲು ಬಂದಿದ್ದು, ಆತನ ತಲೆ ಕಡಿಯುವಂತೆ ನರೇಂದ್ರನನ್ನು ಒಲಿಸುತ್ತಾಳೆ. ರಾಜ ಒಪ್ಪುತ್ತಾನೆ.

ಮುಂದಿನದು ಸಾರಂಗಧಾಮನ ಸತ್ವ ಪರೀಕ್ಷೆ. ಆತನ ಕತ್ತಿಗೆ ತಗುಲಿದ ಕತ್ತಿ, ಕತ್ತು ಕತ್ತರಿಸುವ ಬದಲು ಹೂಮಾಲೆಯಾಗುತ್ತದೆ. ಅಪ್ಪನ ಮನಸ್ಸು ತಿಳಿಯಾಗಿ, ಮಗನನ್ನು ರಾಜ್ಯವನ್ನು ಆಳಲು ಕೇಳಿಕೊಳ್ಳುತ್ತಾನೆ. ಆದರೆ, ಸಾರಂಗಧಾಮನ ಆಯ್ಕೆ ಕಾಡು. ತನ್ನ ಮುಂದಿನ ಜೀವನವನ್ನು ವನವಾಸದಲ್ಲಿಯೇ ಸಾರ್ಥಕಪಡಿಸಿಕೊಳ್ಳಲು ಆತ ಬಯಸುತ್ತಾನೆ. ಇದಿಷ್ಟೂ ಪತ್ತೆಯಾಗಿರುವ ಪಳೆಯುಳಿಕೆಗಳಿಗೆ ಸಂಬಂಧಿಸಿದಂತೆ ಗ್ರಾಮಸ್ಥರು ಹೇಳುವ ಕಥೆ.

ಸಾರಂಗಧಾಮನ ಕತೆಯನ್ನು ಆಧರಿಸಿದ ನಾಟಕಗಳನ್ನು ಪ್ರದರ್ಶಿಸಿದಲ್ಲಿ ಆ ಪ್ರದೇಶಕ್ಕೆ ಏಳಿಗೆಯಿಲ್ಲ ಎನ್ನುವ ನಂಬುಗೆಯೂ ಗ್ರಾಮಸ್ಥರಲ್ಲಿದೆೆ. ಈ ಬಗ್ಗೆ ಕೃಷ್ಣ ಮೂರ್ತಿಯವರನ್ನು ಕೇಳಿದರೆ ಅವರು ನಗುತ್ತಾರೆ, ಯಾವುದಕ್ಕೂ ಅಧ್ಯಯನ ಪೂರ್ತಿಯಾಗಬೇಕು ಎಂದು ಮತ್ತೊಮ್ಮೆ ಹೇಳುತ್ತಾರೆ.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X