ಬೆಂಗಳೂರಿನ ಅಶೋಕನಗರದಲ್ಲಿ ಭೀಕರ ಜೋಡಿ ಕೊಲೆ
ಬೆಂಗಳೂರು : ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಾನ್ವೆಂಟ್ ರಸ್ತೆಯಲ್ಲಿರುವ ಕ್ರಿಶ್ಚಿಯನ್ ವಟಾರದ ಮನೆಯಾಂದರಲ್ಲಿ ಮೀನಾ ರಸ್ಕಿನ್ (73) ಹಾಗೂ ಪ್ರೇಮಾ ಮೇರಿ (52) ಎಂಬಿಬ್ಬರು ಮಹಿಳೆಯರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.
ವಠಾರದಲ್ಲಿರುವ ಪ್ರತ್ಯೇಕ ಮನೆಯ ಮಾಲಿಕರಾದ ಮೀನಾ ಹಾಗೂ ಕೆಲಸದಾಕೆ ಪ್ರೇಮಾ ಎಂಬುವರ ತಲೆ ಒಡೆದು ಕೊಲೆ ಮಾಡಲಾಗಿದೆ. ದುಷ್ಕರ್ಮಿಗಳು ಹತ್ಯೆಗೆ ಹಾರೆಯನ್ನು ಬಳಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಕೊಲೆಗೆ ಕಾರಣವೇನೆಂಬುದು ತಿಳಿದುಬಂದಿಲ್ಲ. ಈ ಪ್ರಕರಣ ಸೋಮವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ. ಕೊಲೆ ಯಾವಾಗ ನಡೆದಿದೆ? ಯಾವ ಕಾರಣಕ್ಕಾಗಿ ನಡೆದಿದೆ? ಎಂಬುದೂ ಸದ್ಯಕ್ಕೆ ತಿಳಿದುಬಂದಿಲ್ಲ.
ಮನೆಗೆ ಬೀಗ ಹಾಕಿದಂತೆಯೇ ಇದ್ದು, ಕಾರು ಕೂಡ ಮನೆ ಮುಂಭಾಗದಲ್ಲೇ ನಿಂತಿದೆ. ಊಟಿಗೆ ಹೋಗಿದ್ದ ರಸ್ಕಿನ್ ಅವರ ಪುತ್ರ ಡಾ. ಜೋಸೆಫ್ ಸೋಮವಾರ ಮಧ್ಯಾಹ್ನ ಮನೆಯ ಬಾಗಿಲು ತೆರೆದಾಗ ಮನೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡು ಬಂತು. ಅವರ ತಾಯಿ ಹಾಗೂ ಕೆಲಸದಾಕೆ ಕೊಲೆಯಾಗಿರುವುದೂ ಆಗಲೇ ಬೆಳಕಿಗೆ ಬಂದದ್ದು.
ಮನೆಯಿಂದ ನಗದು, ಚಿನ್ನ, ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿದೆ ಎನ್ನಲಾಗಿದೆ. ಮನೆಯ ಬೀಗದ ಕೈಯನ್ನು ಹೊರಗೆ ರಹಸ್ಯ ಸ್ಥಳದಲ್ಲಿ ಇಡಲಾಗಿತ್ತು. ಬಹುಶಃ ದುಷ್ಕರ್ಮಿಗಳು ಈ ಬೀಗದ ಕೈ ನೆರವು ಪಡೆದಿರಬಹುದು ಎಂದೂ ಶಂಕಿಸಲಾಗಿದೆ.
ಸ್ಥಳಕ್ಕೆ ಕೇಂದ್ರ ವಿಭಾಗದ ಡಿ.ಸಿ.ಪಿ. ಗೋಪಾಲ್ ಹೊಸೂರ್ ಹಾಗೂ ಎ.ಸಿ.ಪಿ. ಮೋಹನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಶೋಕ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರಿದಿದೆ.