ಬಿಸಿ ಬಿಸಿ ಸುದ್ದಿಯಲ್ಲಿರುವ ಕಾರವಾರಕ್ಕೆ ಮರು ಪಯಣ
1882ರಲ್ಲಿ ತಮ್ಮ ಹಿರಿಯಣ್ಣ ಸತ್ಯೇಂದ್ರನಾಥರು ಕಾರವಾರದಲ್ಲಿ ಐಸಿಎಸ್ ನ್ಯಾಯಮೂರ್ತಿಗಳಾಗಿದ್ದಾಗ ರಾಷ್ಟ್ರಕವಿ ಗುರುದೇವ ರವೀಂದ್ರನಾಥ ಟಾಗೋರ್ರು ಅಲ್ಲಿಗೆ ಬಂದಿದ್ದರು. 19ನೇ ಶತಮಾನದ ಅಂತ್ಯದಲ್ಲಿ ಕಾರವಾರಕ್ಕೆ ಬಂದ ಟೋಗೋರರು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ, ಕನ್ನಡದ ಜನಪದದಲ್ಲಿ ಬೆರೆತು, ತಮ್ಮ ಸಾಹಿತ್ಯ ರಚನೆಗೆ ಸರಿದಾರಿಯನ್ನು ಕಂಡುಕೊಂಡರು ಎಂಬುದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ವಿಷಯ.
ರವೀಂದ್ರರು ಕಾರವಾರದ ಬೀಚ್ನಲ್ಲಿ ಕುಳಿತು ಬರೆದ ಪ್ರಕೃತಿರ್ ಪ್ರತಿರೋಧ (ನೇಚರ್ಸ್ ರಿವೆಂಜ್) ನಾಟಕವು ಕಾರವಾರದಲ್ಲಿ ಅವರು ಕಂಡ ಸತ್ಯ, ಸೌಂದರ್ಯ ಮತ್ತು ಜೀವನ ಪ್ರೀತಿಯ ಪ್ರತೀಕ. 1912ರಲ್ಲಿ ಅವರು ಬರೆದ ತಮ್ಮ ಜೀವನ ಸ್ಮೃತಿಯಲ್ಲಿ (reminiscences) ಪ್ರಕೃತಿರ್ ಪ್ರತಿರೋಧ ಕೃತಿಯ ವಿಷಯವೇ ತಮ್ಮ ಎಲ್ಲ ಸಾಹಿತ್ಯ ಕೃತಿಗಳ ಆಕರ - ತಿರುಳು ಎಂದು ಬಣ್ಣಿಸಿದ್ದಾರೆ. ಅಂದರೆ, ಕಾರವಾರದ ಪ್ರಾಕೃತಿಕ ಸೌಂದರ್ಯ, ಸೊಬಗು, ಜನ- ಜೀವನ ಅವರ ಮೇಲೆ ಎಷ್ಟು ಪ್ರಭಾವ ಬೀರಿತ್ತು ಎಂಬುದು ಅರ್ಥವಾಗುತ್ತದೆ.
ಕಾರವಾರ ಈಗ ರವೀಂದ್ರನಾಥರ ಹೆಸರಿನ ವಿವಾದದೊಂದಿಗೆ ಮತ್ತೆ ಗರಿಗೆದರಿದೆ. ಹೊಸದೊಂದು ನಾಮಕರಣ ವಿವಾದವೂ ಹುಟ್ಟಿಕೊಂಡಿದೆ. ವಿವಾದ ಏನೇ ಇರಲಿ, ಕವೀಂದ್ರರ ಹೃದಯವನ್ನೇ ಗೆದ್ದ ಕಾರವಾರದ ಸೌಂದರ್ಯದ ಪರಿಚಯ ಪ್ರತಿಯಾಬ್ಬ ಕನ್ನಡಿಗರಿಗೂ ಆಗಲೇ ಬೇಕು. ಬನ್ನಿ ಕಾರವಾರದ ಕಡಲತಡಿಯಲ್ಲಿ ಅಡ್ಡಾಡಿ, ನಾವೂ ನಮ್ಮ ನೆಲದ ಸೌಂದರ್ಯವನ್ನು ಆಸ್ವಾದಿಸೋಣ.
ಕಾರವಾರ : ಕೈಲಾಸಗಿರಿಯ ಶ್ವೇತವರ್ಣವನ್ನೂ ನಾಚಿಸುವಂತಹ ಹಾಲುಬಿಳುಪಿನ ಅಲೆಗಳು ಭೋರ್ಗರೆಯುತ್ತಾ ಅಪ್ಪಳಿಸುವ ನಯನ ಮನೋಹರವಾದ ಸುಂದರ ಕಡಲತೀರ ನಮ್ಮ ಕಾರವಾರ. ನಿಸರ್ಗ ಸೌಂದರ್ಯಕ್ಕೆ ಇಲ್ಲಿ ಬರವಿಲ್ಲ. ಅನಂತ ಆನಂದವನ್ನು ನೀಡುವ ಅರ್ಧಚಂದ್ರಾಕೃತಿಯ ಕಡಲತೀರದ ಸೊಬಗು ಅರಸಿಕರ ಮನವನ್ನೂ ರಸಿಕತೆಯ ಕಡಲಲ್ಲಿ ಮುಳುಗಿಸುತ್ತದೆ.
ಬೆಳದಿಂಗಳ ರಾತ್ರಿಯಲ್ಲಿ ಸಮುದ್ರದ ಅಬ್ಬರದ ಅಲೆಗಳನ್ನು ಕಾಣುವುದೇ ಒಂದು ಸೊಬಗು. ಈ ಪ್ರದೇಶದಲ್ಲಿ ಕಾಳಿನದಿಯಲ್ಲಿ ಕುಳಿತು ಬೆಳದಿಂಗಳ ರಾತ್ರಿಯಲ್ಲಿ ವಿಹಾರ ಹೊರಟರಂತೂ ಅದು ವರ್ಣನಾತೀತ. ಕವೀಂದ್ರರಿಗೇ ಸ್ಫೂರ್ತಿ ನೀಡಿದ ಈ ತಾಣದಲ್ಲಿ ಇಂದಿನ - ಹಿಂದಿನ ಹಿರಿ-ಯುವ ಕವಿಗಳೂ ಕಾವ್ಯ - ಕವನ ರಚಿಸಿದ್ದಾರೆ. ರವೀಂದ್ರನಾಥರು ತುಳಿದ ಹಾದಿಯಲ್ಲಿ ತಾವೂ ಅಡಿಯಿಟ್ಟೆವೆಂದು ಆನಂದಿಸಿದ್ದಾರೆ.
ಅಂದು ಇಂದು : ಆದರೆ, 18ನೇ ಶತಮಾನದ ಅಂತ್ಯದಲ್ಲಿದ್ದ ಕಾರವಾರಕ್ಕೂ ಇಂದಿನ ಕಾರವಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಅರಿಯಲು, 18 ಹಾಗೂ 21ನೇ ಶತಮಾನದ ಸುದೀಘ್ರ 200 ವರ್ಷಗಳ ಬಾಳ್ವೆ ಬಾಳಿದ ಅನುಭವಿಗಳ ಅನುಭಾವದ ಅಗತ್ಯವಿಲ್ಲ. ಕಲ್ಪನೆಯ ಕಡಲಲ್ಲಿ ಒಮ್ಮೆ ಈಜಿ ಬಂದರೂ ಇದರ ಅರ್ಥ-ವ್ಯಾಪ್ತಿ ಅರಿವಿಗೆ ಬಂದೀತು.
ಇಂದು ನಾವು ನೋಡಿ ನಲಿಯಬೇಕಾದ ಕಾರವಾರ ದುರ್ವಾಸನೆಯ ತಾಣವಾಗಿದೆ. ಅಶುದ್ಧತೆ ಇಲ್ಲಿ ತಾಂಡವವಾಡುತ್ತದೆ. ಇತರ ಬೀಚ್ಗಳಂತೆಯೇ ಇಲ್ಲೂ ಪ್ಲಾಸ್ಟಿಕ್ ಚೀಲಗಳ ಹಾವಳಿ ಇದೆ. ದುರ್ನಾತ ಬೀರುವ ಕಡಲ ತೀರದಲ್ಲಿ ಉಸುರಿಗಟ್ಟು ನಿಂತು ಸೂರ್ಯಾಸ್ತ ನೋಡವವರೂ ಇದ್ದಾರೆ. ಸ್ವಚ್ಛತೆಯಿಲ್ಲದ ಪ್ರದೇಶದಲ್ಲಿ ನಿಲ್ಲಲಾರದೆ ಹತ್ತೇ ನಿಮಿಷಕ್ಕೇ ಭೂಕೈಲಾಸವನ್ನಾದರೂ ನೋಡೋಣ ಎಂದು ಗೋಕರ್ಣಕ್ಕೋ, ಸೂರ್ಯ ಸ್ನಾನ ಮಾಡುವ ಲಲನೆಯರನ್ನು ಕಲ್ಪಿಸಿಕೊಂಡು, ಮನದಲ್ಲೇ ವಿದೇಶೀ ಮದ್ಯದ ವಾಸನೆ ಹೀರುತ್ತಾ ಗೋವೆಯ ಕಡೆಗೋ ಜನ ಓಡಿ ಬಿಡುತ್ತಾರೆ.
ಕವೀಂದ್ರರ ಸಾಹಿತ್ಯ ಕಲ್ಪನೆಗೆ ಕಾರಣೀಭೂತವಾದ ನೋಡಲೇಬೇಕಾದ ಈ ಕಡಲತೀರವನ್ನು ಮತ್ತಷ್ಟು ಮನಮೋಹಕವನ್ನಾಗಿ ಮಾಡಿ ಪ್ರವಾಸಿಗರನ್ನು ಆಕರ್ಷಿಸುವ ಬದಲು ಕೇವಲ ರವೀಂದ್ರನಾಥ ಟಾಗೋರರ ಹೆಸರಿಟ್ಟರೇ ತಮ್ಮ ಬಾಳು ಧನ್ಯ ಎಂದು ತಿಳಿದಿರುವ ಅಧಿಕಾರಿಗಳ ವರ್ತನೆಯ ಬಗ್ಗೆ ಅಯ್ಯೋ ಎನಿಸುತ್ತದೆ.
ಈ ನಡುವೆಯೂ ನೃತ್ಯ ಕಾರಂಜಿ, ಕರಾವಳಿ ತೀರದ ಪುಟ್ಟ ಪುಟಾಣಿ ರೈಲು, ತೋಡೂರು ಬೀಚು, ಬಾವುಟೆ ಕಟ್ಟೆ ನಿಮ್ಮ ಕೋಪವನ್ನು ಶಮನ ಮಾಡುತ್ತವೆ.