ಕಾಮಣ್ಣರನ್ನು ಮುಗಿಸಿಬಿಡಲು ಮಹಿಳೆಯರಿಗೆ ಡಾ. ರಾಜ್ ಕರೆ
ಮೈಸೂರು : ರಾಜ್ಕುಮಾರ್ ಇಳಿ ವಯಸ್ಸಿನಲ್ಲಿ ಅಬಲೆಯರ ನೆರವಿಗೆ ಮುಂದಾಗಿದ್ದಾರೆ. ಅವರ ಉತ್ಸಾಹ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು . ಸಂದರ್ಭ : ಮೈಸೂರು- ಊಟಿ ರಸ್ತೆಯಲ್ಲಿ ಭಾನುವಾರ ಜರುಗಿದ ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿಕೇಂದ್ರ ‘ಶಕ್ತಿಧಾಮ’ದ ಉದ್ಘಾಟನಾ ಸಮಾರಂಭ.
ಕಾಮದಾಹದಿಂದ ಮೇಲೆರಗುವವರನ್ನು ಮುಗಿಸಿಬಿಡಿ. ಆ ಸಂದರ್ಭದಲ್ಲಿ ಬೇಕಾದರೆ ನನ್ನನ್ನು ಕರೆಯರಿ, ಬಂದು ಕೂಡಿಕೊಳ್ಳುತ್ತೇನೆ. ಎಂದು ಹೇಳುವಾಗ ರಾಜ್ ಕಣ್ಣುಗಳಲ್ಲಿ ಇತ್ತೀಚೆಗೆ ಅಪರೂಪವಾಗಿದ್ದ ಹೊಳಪು ಇಣುಕುತ್ತಿತ್ತು . ಎಲ್ಲಿಯವರೆಗೆ ಮಹಿಳೆ ಶೋಷಣೆಯನ್ನು ತಾಳಿಕೊಳ್ಳುತ್ತಾಳೋ, ಅಲ್ಲಿಯವರೆಗೆ ಶೋಷಣೆ ನಡೆಯುತ್ತಲೇ ಇರುತ್ತದೆ. ಶೋಷಣೆಯನ್ನು ಎದುರಿಸಲು ಮಹಿಳೆಯರು ಕುಂಗ್ಫೂ, ಕರಾಟೆಗಳಂಥಾ ಆತ್ಮರಕ್ಷಣೆ ವಿದ್ಯೆಗಳನ್ನು ಕಲಿಯಬೇಕೆಂದು, ಆ ಮೂಲಕ ಮಹಿಳೆರು ಪುರುಷರಾಗಬೇಕೆಂದು ರಾಜ್ ಕರೆ ನೀಡಿದರು.
ಶಕ್ತಿಧಾಮದ ಸ್ಥಾಪನೆಗೆ ನೆರವು ನೀಡಿದವರನ್ನು ರಾಜ್ ಸನ್ಮಾನಿಸಿದರು. ಈ ಶಕ್ತಿಧಾಮದ ರೂವಾರಿ ರಾಜ್ ಎಂದು ಹೇಳಲಾಗುತ್ತಿದೆ. ಅದನ್ನು ನಾನು ನಂಬುವುದಿಲ್ಲ . ರಾಜ್ಕುಮಾರ್ಗೆ ಯಾವತ್ತೂ ಇಷ್ಟು ಒಳ್ಳೆಯ ಬುದ್ಧಿ ಬಂದಿಲ್ಲ . ಹಿಂದೆ ಕೋತಿಗಳು ಆಂಜನೇಯನನ್ನು ಹೊಗಳಿ, ಉಬ್ಬಿಸಿ ಸಮುದ್ರ ಹಾರಿಸಿದಂತೆ, ನನ್ನನ್ನು ಚುಚ್ಚಿ ಚುಚ್ಚಿ ಈ ಕೆಲಸ ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹಿರಿಯ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರು, ದಾರಿ ತಪ್ಪಿದ ಹೆಣ್ಣು ಮಕ್ಕಳಿಗೆ ಆಸರೆ ನೀಡುವ ಕೆಲಸ ನಿಮ್ಮಿಂದಾಗಬೇಕೆಂದು ಪ್ರೇರೇಪಿಸಿದರು. ಆದ್ದರಿಂದ ಶಕ್ತಿಧಾಮದ ಕಾರಣಪುರುಷರು ಅವರೇ ಹೊರತು ತಾವಲ್ಲ ಎಂದು ರಾಜ್ ಬಣ್ಣಿಸಿದರು. ಶಕ್ತಿಧಾಮಕ್ಕೆ ಸ್ಥಳದಾನ ನೀಡಿದ ಸುತ್ತೂರು ಸಂಸ್ಥಾನವನ್ನು ಅವರು ಶ್ಲಾಘಿಸಿದರು. ಶಾಸಕ ಎಚ್.ಎಸ್. ಶಂಕರಲಿಂಗೇಗೌಡ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)