ಭೀಮೆ- ಕೃಷ್ಣೆಯರಿಗೆ ನೀರುಹರಿಸಲು ಒಪ್ಪಿಕೊಂಡ ಮಹಾರಾಷ್ಟ್ರ
ಬಿಜಾಪುರ : ಜಲಕ್ಷಾಮದಿಂದ ತತ್ತರಿಸುತ್ತಿರುವ ಜಿಲ್ಲೆಯ ಜನರಿಗೆ ನೀರು ಹನಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದ್ದು , ಉಜಿನಿ ಅಣೆಕಟ್ಟೆಯಿಂದ ಅರ್ಧ ಟಿಎಂಸಿ ನೀರನ್ನು ಭೀಮಾ ನದಿಗೆ ಹಾಗೂ ಕೊಯ್ನಾದಿಂದ ಒಂದು ಟಿಎಂಸಿ ನೀರನ್ನು ಕೃಷ್ಣಾ ನದಿಗೆ ಹರಿಸಲು ಒಪ್ಪಿಕೊಂಡಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ರಾವ್ ದೇಶ್ಮುಖ್ ಅವರನ್ನು ಬಿಜಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಕಾಶಪ್ಪನವರ್ ಭೇಟಿ ಮಾಡಿ ನಡೆಸಿದ ಮಾತುಕತೆ ಫಲಪ್ರದವಾಗಿದೆ. ಬ್ಯಾರೇಜ್ ಗೇಟುಗಳನ್ನು ಮುರಿದ ಆರೋಪದ ಮೇಲೆ ಕಾಶಪ್ಪನವರ್ ಮೇಲೆ ಮಹಾರಾಷ್ಟ್ರ ಪೊಲೀಸರು ದಾಖಲು ಮಾಡಿದ್ದ ಮೊಕದ್ದಮೆಯ ವಿಚಾರಣೆಯನ್ನು ಮುಂದುವರೆಸದಿರುವ ಆಶ್ವಾಸನೆಯನ್ನು ಕೂಡ ದೇಶ್ಮುಖ್ ಅವರು ಕಾಶಪ್ಪನವರ್ರಿಗೆ ಮಾತುಕತೆಯ ಸಂದರ್ಭದಲ್ಲಿ ನೀಡಿದ್ದಾರೆ.
ಮಾತುಕತೆಯ ಸಂದರ್ಭದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಅಧ್ಯಕ್ಷ ಶರದ್ ಪವಾರ್ ಹಾಗೂ ಉಪ ಮುಖ್ಯಮಂತ್ರಿ ಛಗಲ್ ಭುಜಬಲ್ ಹಾಜರಿದ್ದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಪತ್ರವನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಗೆ ಕಾಶಪ್ಪನವರ್ ತಲುಪಿಸಿದರು.
ಚಳವಳಿ ಕೈಬಿಡಿ : ಮಹಾರಾಷ್ಟ್ರ ಸರ್ಕಾರ ನೀರು ಹರಿಸಲು ಒಪ್ಪಿರುವುದರಿಂದ, ಭೀಮಾನದಿಗೆ ನೀರು ಹರಿಸುವ ಸಂಬಂಧ, ನದಿಯ ನೀರನ್ನು ಅವಲಂಬಿಸಿರುವ ಗ್ರಾಮಗಳ ಜನರು ನಡೆಸುತ್ತಿದ್ದ ಆಮರಣ ನಿರಶನವನ್ನು ಕೈ ಬಿಡಬೇಕೆಂದು ಕಾಶಪ್ಪನವರ್ ಚಳವಳಿ ನಿರತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ನೀರು ಹರಿಯುವ ಪ್ರಕ್ರಿಯೆ ಪ್ರಾರಂಭವಾಗಬಹುದೆಂದು ಅವರು ಹೇಳಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...