ಸಚಿವರಿಗೇ ಲಂಚ ಕೇಳುವ ಪೊಲೀಸರು ನಮ್ಮ - ನಿಮ್ಮನ್ನು ಬಿಟ್ಟಾರೆಯೇ?
ಗುಲ್ಬರ್ಗಾ : ದಂಡಲ್ಲಿ ಸೋದರ ಮಾವನೇ? ಲಂಚ ಕೇಳುವುದು ತಮ್ಮ ಆಜನ್ಮ ಸಿದ್ಧ ಹಕ್ಕು ಎಂದು ತಿಳಿದಿರುವ ಸರಕಾರಿ ನೌಕರರಿಗೆ, ಸಚಿವರಾದರೇನು? ಜನಸಾಮಾನ್ಯರಾದರೇನು? ಬಹುಶಃ ಸಚಿವರುಗಳೇ ಲಂಚ ಪಡೆಯುವಾಗ ತಾವೇಕೆ ಕೇಳಬಾರದು ? ಎಂಬುದು ಅವರ ಮನೋಭಾವ ಇರಬೇಕು.
ಮೊನ್ನೆ ಗುಲ್ಬರ್ಗಾದಲ್ಲಿ ಆದದ್ದೂ ಅದೇ.. ರಸ್ತೆಯಲ್ಲಿ ಸತ್ತು ಬಿದ್ದಿದ್ದ ಭಿಕ್ಷುಕನ ಹೆಣ ಸಾಗಿಸಲು, ಗುಲ್ಬರ್ಗಾ ಪೊಲೀಸರು ರಾಜ್ಯದ ವಯಸ್ಕರ ಶಿಕ್ಷಣ ಸಚಿವರಿಗೇ ಲಂಚ ಕೊಡುವಂತೆ ಕೇಳಿದರು. ಭ್ರಷ್ಟಾಚಾರ ಎಷ್ಟು ತಾರಕಕ್ಕೆ ಹೋಗಿದೆ ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆ.
ನಡೆದದ್ದು ಇಷ್ಟು : ಸೋಮವಾರ ಇಲ್ಲಿನ ವೆಂಕಟೇಶ ನಗರದಲ್ಲಿ ಭಿಕ್ಷುಕನ ಹೆಣವೊಂದು ಅನಾಥವಾಗಿ ಬಿದ್ದಿತ್ತು. ನಾಯಿಗಳು ಹೆಣವನ್ನು ಮುತ್ತಿ ಎಳೆದಾಡುತ್ತಿದ್ದವು. ದುರವಸ್ಥೆಯಲ್ಲಿದ್ದ ಈ ಹೆಣ ಇಲ್ಲಿಗೆ ಭೇಟಿ ನೀಡಿದ್ದ ಸಚಿವರ ಕಣ್ಣಿಗೆ ಬಿತ್ತು. ಕೂಡಲೇ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ಫೋನ್ ಮಾಡಿದ್ರು.
ಹಲೋ ನಾನು ಮಂತ್ರಿ ಚವ್ಹಾಣ್ ಮಾತಾಡ್ತಾ ಇರೋದು, ಇಲ್ಲೊಂದು ಭಿಕ್ಷುಕನ ಶವ ಬಿದ್ದಿದೆ, ನಾಯಿಗಳು ಮುತ್ತಿಕೊಂಡಿವೆ. ಕೂಡಲೇ ಅದನ್ನು ಸಾಗಿಸಿ ಎಂದು ಹೇಳಿದರು. ಅತ್ತ ಠಾಣೆಯಲ್ಲಿ ಫೋನ್ ರಿಸೀವ್ ಮಾಡಿದ ಧೀರ ಸ್ವಾಮಿ ಹಾಗೆಲ್ಲಾ ಹೆಣ ಸಾಗ್ಸಕ್ಕೆ ಆಗಲ್ಲ. ಅದಕ್ಕೆ ಒಂದು ಸಾವಿರ ರುಪಾಯಿ ಆಗತ್ತೆ ಅಂತ ಉತ್ತರ ಕೊಟ್ಟ.
ಸಚಿವರು ದಂಗಾದರು. ಸುಧಾರಿಸಿಕೊಂಡು ಉತ್ತರ ಕೊಟ್ರು. ಯಾರ್ರೀ ಅದು, ನಾನು ಈ ರಾಜ್ಯದ ಸಚಿವ ಮಾತಾಡ್ತಾ ಇರೋದು, ನನ್ನಹತ್ರಾನೇ ಲಂಚ ಕೇಳ್ತೀರಾ? ಎಸ್ಟ್ರೀ ಧೈರ್ಯ ಅಂದ್ರು. ಸಾರಿ ಸಾರ್ ಗೊತ್ತಾಗಲಿಲ್ಲ. ಈಗಲೇ ಹೆಣ ಸಾಗಿಸೋ ವ್ಯವಸ್ಥೆ ಮಾಡ್ತೀವಿ ಅಂತ ಹೇಳಿ ಆ ಭೂಪ ಫೋನ್ ಕುಕ್ಕಿದ.
ವಿಧಿ ಇಲ್ಲದೆ ಸಚಿವರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಫೋನ್ ಮಾಡಿದ್ರು, ಅಧಿಕಾರಿಗಳು ಚುರುಕಾದ್ರು, ಅನಾಥ ಹೆಣಕ್ಕೆ ಕೊನೆಗೂ ಮೋಕ್ಷ ಸಿಕ್ತು. ನೋಡಿ ಕಾಲ ಕೆಟ್ಟೋಗಿದೆ. ಅಲ್ಲ ಮಿನಿಸ್ಟ್ರೇ ಫೋನ್ ಮಾಡಿದ್ರೂ ಲಂಚ ಕೇಳ್ತಾರಲ್ಲ, ಇನ್ನು ಇವರು ಜನ ಸಾಮಾನ್ಯರನ್ನು ಬಿಡ್ತಾರಾ? ಈ ಪ್ರಶ್ನೆ ಕೇಳ್ದೋರು ಬೇರೆ ಯಾರೂ ಅಲ್ಲ. ಸ್ವತಃ ಸಚಿವರೇ.
What do you think about this story
ಮುಖಪುಟ / ಇವತ್ತು... ಈ ಹೊತ್ತು...