ಬಿಜಾಪುರ : ಬ್ಯಾರೇಜ್ ಗೇಟು ಮುರಿದುನೀರು ಹರಿಸಿದ ರೈತರು
ಬಿಜಾಪುರ : ಮಹಾರಾಷ್ಟ್ರ ಸರ್ಕಾರ ನೀರು ಬಿಡುತ್ತದೆಂದು ಬೊಗಸೆಯಾಡ್ಡಿ ಕಾದಿದ್ದ ಈ ಭಾಗದ ರೈತರ ಸಹನೆ ಸೋಮವಾರ ರೊಚ್ಚಿಗೆ ಬದಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಗುಂಪುಗೂಡಿದ ರೈತರು ಸೋಮವಾರ ಸಂಜೆ ಶಿರನಾಳ- ಹೌಜ್ ಬ್ಯಾರೇಜ್ನ ಗೇಟುಗಳನ್ನು ಕಿತ್ತೆಸೆದು ಉಜನಿ ನೀರು ಕರ್ನಾಟಕದ ಭೀಮಾನದಿ ಪಾತ್ರದಲ್ಲಿ ಹರಿಯುವಂತೆ ಮಾಡುವಲ್ಲಿ ಯಶಸ್ವಿಯಾದರು.
ರೈತರು ಗೇಟ್ಗಳನ್ನು ಕಿತ್ತೆಸೆಯುವುದನ್ನು ಪಹರೆಗಿದ್ದ ಕರ್ನಾಟಕ ಹಾಗೂ ಮಹಾರಾಷ್ಟ್ರ ಪೊಲೀಸರು ಅಸಹಾಯಕರಾಗಿ ನೋಡುತ್ತಾ ನಿಲ್ಲಬೇಕಾಯಿತು. ಬ್ಯಾರೇಜ್ನ 100 ಗೇಟ್ಗಳಲ್ಲಿ ನಡುಭಾಗದ ಸುಮಾರು 25 ಗೇಟ್ಗಳನ್ನು ರೈತರು ಕಿತ್ತು ನೀರಲ್ಲೆಸೆದರು. ಇದರಿಂದಾಗಿ ಆ ಬದಿಯಲ್ಲಿ ಸಂಗ್ರಹವಾಗಿದ್ದ ನೀರು ಕರ್ನಾಟಕದಲ್ಲಿಯ ನದಿ ಪ್ರದೇಶದಕ್ಕೆ ಹರಿದುಬರುತ್ತಿದೆ.
ಪೊಲೀಸರ ಸಮ್ಮುಖದಲ್ಲೇ ರೈತರು ಗೇಟ್ಗಳನ್ನು ಮುರಿದಿದ್ದು , ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರಿಂದ ಮಹಾರಾಷ್ಟ್ರ ಪೊಲೀಸರು ಗೋಲಿಬಾರ್ಗೆ ಸಿದ್ಧತೆ ನಡೆಸಿದರು. ಗೋಲಿಬಾರ್ ಸುಳಿವರಿತ ರೈತರು ತಕ್ಷಣವೇ ಬ್ಯಾರೆಜ್ನ ಸ್ಥಳದಿಂದ ದಿಕ್ಕಾಪಾಲಾಗಿ ಓಡಿದರು. ಆದರೆ, ಆ ಹೊತ್ತಿಗೆ ನೀರಿನ ಹರಿವು ಪ್ರಾರಂಭವಾಗಿತ್ತು .
ಕೃಷ್ಣ ಅಸಮಾಧಾನ : ಬ್ಯಾರೇಜ್ನ ಗೇಟ್ಗಳನ್ನು ರೈತರು ಕಿತ್ತೆಸೆದ ಬಗ್ಗೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅಸಮಾಧಾನಗೊಂಡಿದ್ದಾರೆ ಎಂದು ಬಿಜಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಕಾಶಪ್ಪನವರ್ ಹೇಳಿದ್ದಾರೆ.
(ಇನ್ಫೋ ವಾರ್ತೆ)