ಅರಕಲಗೂಡು ತಾಲೂಕು ಮುದಗೂರಲ್ಲಿ ಹುಲಿ ಹಾವಳಿ
ಅರಕಲಗೂಡು : ಅರಕಲಗೂಡು ತಾಲೂಕು ಮುದಗೂರು ಮತ್ತು ಬೈಸೂರು ಅರಣ್ಯ ಪ್ರದೇಶದಲ್ಲಿ ಹುಲಿಯಾಂದು ಹಾವಳಿ ಮಾಡುತ್ತಿದ್ದು, ಕನಿಷ್ಠ 8 ಜಾನುವಾರುಗಳು ಹುಲಿಯ ಬಾಯಿಗೆ ತುತ್ತಾಗಿವೆ ಎಂದು ವರದಿ ತಿಳಿಸಿದೆ. ಈ ಸಂಬಂಧ ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿದೆ.
ಮುದಗೂರು ಅರಣ್ಯ ಪ್ರದೇಶದ ದೊಡ್ಡಬೆಮ್ಮತ್ತಿ, ಹೊಳಲಗೋಡು, ಕತ್ತಿಮಲ್ಲೇನಹಳ್ಳಿ, ಮಲ್ಲಿಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮದ ಜನತೆ ಕಳೆದ 20 ದಿನಗಳಿಂದಲೂ ಹುಲಿಯ ಹಾವಳಿಯಿಂದ ಭಯಭೀತರಾಗಿದ್ದಾರೆ. ಏಳು ಜಾನುವಾರುಗಳನ್ನು ಕೊಂದಿರುವ ಹುಲಿ, ಗ್ರಾಮಸ್ಥರ ಮೇಲೆ ಎರಗಿದ ವರದಿಗಳು ಬಂದಿಲ್ಲ.
ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಸಿ. ರಂಗಸ್ವಾಮಿ ಅವರಿಗೆ ಸೇರಿದ 3 ಹಸು, 2 ಎತ್ತು ಮುದಗೂರು ಅರಣ್ಯ ಪ್ರದೇಶದಲ್ಲಿ ಹುಲಿಗೆ ಆಹಾರವಾಗಿದ್ದರೆ, ಬೈಸೂರು ಗ್ರಾಮದಲ್ಲಿ 2 ಹಸು ಹಾಗೂ ಒಂದು ಎಮ್ಮೆ ಬಲಿಯಾಗಿದೆ ಎನ್ನಲಾಗಿದೆ. ಹಸುವೊಂದನ್ನು ಸುಮಾರು ಅರ್ಧ ಕಿ.ಮೀಟರ್ ದೂರದವರೆಗೆ ಹುಲಿ ಎಳೆದೊಯ್ದು ಕೊಂದು ತಿಂದಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡುತ್ತಿರುವ ಬಗ್ಗೆ ರಂಗಸ್ವಾಮಿ ಅವರು ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಣ್ಣನವರಿಗೆ ದೂರು ನೀಡಿದ್ದಾರೆ. ಇಲಾಖೆಯ ಸಿಬ್ಬಂದಿ ಹುಲಿ ಬೋನೊಂದನ್ನು ಈ ಪ್ರದೇಶಕ್ಕೆ ತಂದಿದ್ದು, ಕಳೆದೆರಡು ದಿನದಿಂದ ಹುಲಿಗಾಗಿ ಕಾಯುತ್ತಿದ್ದಾರೆ.