ಮೈಸೂರು : ರೈಲ್ವೆ ಇಲಾಖೆ ನಿರ್ಲಕ್ಷ್ಯ ಪ್ರತಿಭಟಿಸಿ ಶನಿವಾರ ರೈಲು ತಡೆ
ಮೈಸೂರು : ಬೆಂಗಳೂರು ಬ್ರಾಡ್ಗೇಜ್ ರೈಲ್ವೆ ಮಾರ್ಗ ನಿರ್ಮಾಣದಿಂದ ಉಂಟಾಗಿರುವ ಅನಾನುಕೂಲಗಳನ್ನು ಸರಿಪಡಿಸುವಲ್ಲಿ ರೈಲ್ವೆ ಇಲಾಖೆ ತೋರುತ್ತಿರುವ ನಿರ್ಲಕ್ಷ್ಯವನ್ನು ಪ್ರತಿಭಟಿಸಲು ಮೈಸೂರು ತಾಲ್ಲೂಕಿನ ನಾಗನಹಳ್ಳಿ ಹಾಗೂ ಸುತ್ತುಮುತ್ತಲ ಗ್ರಾಮಸ್ಥರು ರೈಲು ತಡೆ ನಡೆಸಲು ನಿಶ್ಚಯಿಸಿದ್ದಾರೆ.
ರೈತಸಂಘದ ನೇತೃತ್ವದಲ್ಲಿ ಶನಿವಾರ ಬೆಳಿಗ್ಗೆ ರೈಲು ತಡೆ ಪ್ರತಿಭಟನೆ ನಡೆಯಲಿದೆ. ಬ್ರಾಡ್ಗೇಜ್ ನಿರ್ಮಾಣದ ನಂತರ ನಾಗನಹಳ್ಳಿ ಹಾಗೂ ಸುತ್ತಲ ಗ್ರಾಮಗಳ ಜನರು ತಮ್ಮ ಹೊಲ- ಮನೆಗಳಿಗೆ ಹೋಗಿ ಬರಲು ತೊಂದರೆಯಾಗಿದೆ. ಶವಗಳನ್ನು ಸ್ಮಶಾನಕ್ಕೆ ಸಾಗಿಸಲು ಕೂಡ ತೊಂದರೆಯಾಗಿದೆ. ಈ ವಿಷಯವನ್ನು ರೈಲ್ವೆ ಇಲಾಖೆಯ ಗಮನಕ್ಕೆ ತಂದಿದ್ದರೂ, ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದರಿಂದ ರೈಲು ತಡೆ ನಡೆಸುತ್ತಿದ್ದೇವೆ ಎಂದು ರೈತಸಂಘದ ನಾಗನಹಳ್ಳಿ ಶಾಖೆಯ ಅಧ್ಯಕ್ಷ ಕುಮಾರಸ್ವಾಮಿ ಸುದ್ದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗ್ರಾಮಸ್ಥರಿಗೆ ಉಂಟಾಗಿರುವ ತೊಂದರೆಯನ್ನು ನಿವಾರಿಸಲು ಹಳಿಗಳಿಂದ ಯಾವುದೇ ಸಮಸ್ಯೆ ಉಂಟಾಗದ ರೀತಿಯಲ್ಲಿ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ರೈಲ್ವೆ ಇಲಾಖೆಯನ್ನು ಒತ್ತಾಯಿಸುತ್ತಿದ್ದಾರೆ ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.
(ಇನ್ಫೋ ವಾರ್ತೆ)