ಅನಿವಾಸಿ ಕನ್ನಡಿಗ ನಟರಾಜ್ರಿಗೆ ‘ ಹೃದಯವಂತರು’ ಪ್ರಶಸ್ತಿ
ಶಿವಮೊಗ್ಗ : ಚಿತ್ರದುರ್ಗದ ಅಬಕಾರಿ ಜಿಲ್ಲಾಧಿಕಾರಿ , ಲೇಖಕ ರೋಹಿದಾಸ್ ನಾಯಕ್ ಹಾಗೂ ಅನಿವಾಸಿ ಭಾರತೀಯ ಬರಹಗಾರ, ಅಮೆರಿಕೆಯಲ್ಲಿ ಯ ಕನ್ನಡಿಗರ ಸಂಘಟಕರೂ ಆದ ನಟರಾಜ್ ಅವರಿಗೆ ‘ಹೃದಯವಂತರು’ ಪ್ರಶಸ್ತಿಯನ್ನು ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಆನಂದಪುರಂ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಪ್ರದಾನ ಮಾಡಿದರು.
ನವರತ್ನ ಇಂಟರ್ ನ್ಯಾಶನಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಂಗಳೂರಿನ ಹೃದಯವಾಹಿನಿ ಪಾಕ್ಷಿಕದ ದ್ವಿತೀಯ ವಾರ್ಷಿಕೋತ್ಸವ ಸಂಬಂಧ ಪ್ರಶಸ್ತಿಯನ್ನು ನೀಡಲಾಯಿತು. ಪ್ರಶಸ್ತಿ ವಿತರಣೆಯ ನಂತರ ಮಾತನಾಡಿದ ಸ್ವಾಮೀಜಿ, ಬರಹಗಳು- ಲೇಖನಗಳು ಕೇವಲ ಮನಸ್ಸನ್ನು ತಟ್ಟಿದರೆ ಸಾಲದು. ಅವು ಹೃದಯವನ್ನು ಮುಟ್ಟುವಂತಿದ್ದಾಗ ಮಾತ್ರ ಆ ಬರಹಗಳ ಮೌಲ್ಯ ಹೆಚ್ಚುತ್ತದೆ ಎಂದರು. ಈ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಿರುವ (ಎರಡನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ) ಹೃದಯವಾಹಿನಿ ಪಾಕ್ಷಿಕವನ್ನು ಅವರು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಹೃದಯವಾಹಿನಿ ಸಂಪಾದಕ ಕೆ.ಪಿ. ಮಂಜುನಾಥ್ ಅವರ ‘ಶ್ರವಣ ನಯನ’ ಲಘು ಬರಹಗಳ ಕೃತಿಯನ್ನು ಸಹ್ಯಾದ್ರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ನೋ.ಸಂ. ತಿಮ್ಮೇಗೌಡ ಬಿಡುಗಡೆ ಮಾಡಿದರು. ಪತ್ರಿಕೆಯ ವತಿಯಿಂದ ಆಯೋಜಿಸಲಾಗಿದ್ದ ಜಾಗತಿಕ ಮಟ್ಟದ ಕನ್ನಡ ಕಥಾ ಸ್ಪರ್ಧೆಯ ವಿಜೇತರಿಗೆ ಮುಖ್ಯ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಕಲಗೋಡು ರತ್ನಾಕರ ವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...