ತೆಂಗಿನಿಂದ ಅಡಿಕೆ ಬೆಳೆಗೂ ವ್ಯಾಪಿಸಿದ ಮದ್ದಿಲ್ಲದ ನುಸಿರೋಗ
ಬೆಂಗಳೂರು : ತೆಂಗು ಬೆಳೆಗಾರರನ್ನು ಕಂಗಾಲಾಗಿಸಿದ ನುಸಿರೋಗ ಈಗಾಗಲೇ ಮಾರುಕಟ್ಟೆಯಲ್ಲಿ ನೆಲಕಚ್ಚಿರುವ ಅಡಿಕೆ ಬೆಳೆ ಮೇಲೂ ದಾಳಿಯಿಟ್ಟಿರುವುದು ಧೃಢವಾಗಿದೆ.
ಅಡಿಕೆಗೆ ನುಸಿಪೀಡೆ ವ್ಯಾಪಿಸಿರುವುದು ಅಧ್ಯಯನದಿಂದ ಸಾಬೀತಾಗಿರುವುದಾಗಿ ಕೃಷಿ ಸಚಿವ ಟಿ.ಬಿ. ಜಯಚಂದ್ರ ಗುರುವಾರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ತುಮಕೂರು ಮತ್ತು ಶೃಂಗೇರಿ ಪ್ರದೇಶಗಳು ಸೇರಿದಂತೆ ಅಡಿಕೆ ಬೆಳೆಯುವ ಭಾಗದಲ್ಲಿ ನುಸಿಪೀಡೆ ಕಾಣಿಸಿಕೊಂಡಿದೆ. ಈ ಭಾಗಗಳಲ್ಲಿರುವ ಅಡಿಕೆ ಬೆಳೆಯನ್ನು ಪರೀಕ್ಷಿಸಲು ಕೃಷಿ ವಿಜ್ಞಾನಿಗಳನ್ನೊಳಗೊಂಡ ಕಾರ್ಯಪಡೆ ರಚಿಸಲಾಗಿದೆ ಎಂದು ಅವರು ಹೇಳಿದರು.
ಜೂನ್ 1 ರಿಂದ ತೆಂಗಿನ ಮರಗಳ ಏಡ್ಸ್ ಎಂದು ಹೆಸರಾಗಿರುವ ನುಸಿಪೀಡೆ ವಿರುದ್ಧ ವ್ಯಾಪಕ ಆಂದೋಲನವನ್ನು ಹಮ್ಮಿಕೊಳ್ಳುವ ಮೂಲಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಆಂದೋಲನದ ಪ್ರಯುಕ್ತ ರಾಜ್ಯದೆಲ್ಲೆಡೆ ಏಕ ಕಾಲದಲ್ಲಿ ಔಷಧಿ ಸಿಂಪಡಿಸಲಾಗುವುದು ಎಂದು ವಿವರಿಸಿದ ಸಚಿವರು ಕಳೆದ ವರ್ಷವೂ ಸರ್ಕಾರ ನುಸಿಪೀಡೆಯ ವಿರುದ್ಧ ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದರೂ, ರೋಗ ನಿಯಂತ್ರಣಕ್ಕೆ ಬಂದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ನುಸಿಪೀಡೆ ನಿವಾರಣೆಗೆ ಔಷಧಿ ಇಲ್ಲ
ತಮಿಳುನಾಡು, ಕೇರಳ ರಾಜ್ಯಗಳೂ ನುಸಿಪೀಡೆಯ ಸಮಸ್ಯೆಯನ್ನು ಎದುರಿಸುತ್ತಿವೆ. ಆದರೆ ರೋಗಕ್ಕೆ ಈ ವರೆಗೆ ಪರಿಣಾಮಕಾರಿ ಔಷಧಿ ಕಂಡುಹಿಡಿಯಲಾಗಿಲ್ಲ. ಕೇರಳದಲ್ಲಿ ಔಷಧಿ ಸಿಂಪಡಣೆಯನ್ನು ಕೂಡ ಕೈಬಿಡಲಾಗಿದೆ. ಹಾಗಾಗಿ ಈ ಸಮಸ್ಯೆಯನ್ನು ಪ್ರಕೃತಿಯೇ ನಿಯಂತ್ರಿಸಬೇಕು. ಮಣ್ಣಿನಲ್ಲಿ ಪೌಷ್ಠಿಕಾಂಶ ಇರುವಂತೆ ನೋಡಿಕೊಂಡರೆ, ನುಸಿರೋಗ ನಿಗ್ರಹ ಶಕ್ತಿಯನ್ನು ನಿಧಾನವಾಗಿ ಮರ ಪಡಕೊಳ್ಳುತ್ತದೆ ಎಂದು ಕೇರಳಿಗರು ಅಭಿಪ್ರಾಯ ಪಟ್ಟಿದ್ದಾರೆ.
ನುಸಿ ಪೀಡೆಯಿಂದ ಆಗಿರುವ ನಷ್ಟಕ್ಕೆ ಸಂಬಂಧಿಸಿ ಜೂನ್ 21ರಂದು ಪ್ರಧಾನಿ ವಾಜಪೇಯಿ ಕರೆದಿರುವ ಮುಖ್ಯಮಂತ್ರಿಗಳ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗುವುದು ಎಂದು ಜಯಚಂದ್ರ ರೈತರಿಗೆ ಭರವಸೆ ಇತ್ತಿದ್ದಾರೆ.
(ಇನ್ಫೋ ವಾರ್ತೆ)