ವಾಜಪೇಯಿ ವಿರುದ್ಧ ಸೋನಿಯಾ: ಅದೆಲ್ಲಾ ಆಟವೆಂದರು ಕೃಷ್ಣ
ಬೆಂಗಳೂರು : ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಪ್ರಧಾನಿ ವಾಜಪೇಯಿ ವಿರುದ್ಧ ಮಾಡಿರುವ ಕಠಿಣ ಟೀಕೆಯನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ , ಇದೆಲ್ಲಾ ರಾಜಕೀಯ ಆಟದ ಒಂದು ಭಾಗ ಎಂದು ಬಣ್ಣಿಸಿದ್ದಾರೆ.
ಆಡಳಿತ ಪಕ್ಷದವರನ್ನು ಎದುರು ಪಕ್ಷಗಳ ನಾಯಕರು ಟೀಕಿಸುವುದು ಸಹಜವಾದದ್ದು ಎಂದು ಅಭಿಪ್ರಾಯಪಟ್ಟ ಕೃಷ್ಣ , ವಾಜಪೇಯಿ ವಿರುದ್ಧ ಸೋನಿಯಾ ಕಠಿಣ ಪದಗಳನ್ನು ಬಳಸಿದ್ದಾರೆ ಎನ್ನುವ ಸುದ್ದಿಗಳನ್ನು ಸಾರಾ ಸಗಟಾಗಿ ತಳ್ಳಿಹಾಕಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ವಾಜಪೇಯಿ ಅವರನ್ನು ಸಂಸತ್ತಿನ ಕಲಾಪಕ್ಕೆ ಮುನ್ನ ಹಾಗೂ ಕಲಾಪದ ನಂತರ ಸೋನಿಯಾಗಾಂಧಿ ಟೀಕಿಸಿದ ಭಾಷೆಗೆ ಎದುರಾದ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದರು.
ಸರ್ವ ಪಕ್ಷಗಳ ಸಭೆಯಲ್ಲಿ ತೆಹಲ್ಕಾ ಬಯಲು ಮಾಡಿದ ರಕ್ಷಣಾ ಒಪ್ಪಂದಗಳ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಪಿಸಿ ತನಿಖೆ ನಡೆಸಲು ಸರ್ಕಾರ ಮುಕ್ತ ಮನಸ್ಸಿನಿಂದಿರುವುದಾಗಿ ಪ್ರಧಾನಿ ವಾಜಪೇಯಿ ಹೇಳಿದ್ದರು. ಆದರೆ, ಸಭೆಯಾಚೆ ಬಿಜೆಪಿಯ ವಕ್ತಾರ ವಿಜಯ್ ಕುಮಾರ್ ಮಲ್ಹೋತ್ರ ತನಿಖೆಗೆ ಒಪ್ಪುವ ವಿಷಯವನ್ನು ಪರಿಗಣಿಸಲಾಗಿಲ್ಲ ಎಂದು ಹೇಳಿಕೆ ನೀಡಿದರು. ಪ್ರಧಾನಿಯವರ ಮಾತುಗಳನ್ನು ತುಂಬು ಗೌರವದಿಂದ ಪರಿಗಣಿಸುವಾಗ, ಇಂಥಾ ಅಭಾಸಗಳು ಸಂಭವಿಸಿದಲ್ಲಿ ಆ ಮಾತುಗಳ ಮೌಲ್ಯವೆಲ್ಲಿ ಉಳಿಯುತ್ತದೆ ಎಂದು ಕೃಷ್ಣ ವಿಷಾದಿಸಿದರು.
(ಇನ್ಫೋ ವಾರ್ತೆ)