ನವಮಂಗಳೂರು ಬಂದರು ಅವ್ಯವಹಾರ : ನಿಷ್ಪಕ್ಷಪಾತ ತನಿಖೆಗೆ ಆಗ್ರಹ
ಮಂಗಳೂರು : ನವ ಮಂಗಳೂರು ಬಂದರು ಮಂಡಳಿ ಅಧ್ಯಕ್ಷ ಕ್ಯಾಪ್ಟನ್ ರಾಮ್ಕುಮಾರ್ ಭಾಗಿಯಾಗಿರುವರೆನ್ನಲಾದ ಅವ್ಯವಹಾರ ಕುರಿತಂತೆ ನಡೆಯುತ್ತಿರುವ ಸಿ.ಬಿ.ಐ. ತನಿಖೆ ಯಾವುದೇ ರೀತಿಯ ಪ್ರಭಾವಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಕಾನೂನು ಸಚಿವ ಅರುಣ್ ಜೈಟ್ಲಿ ಅವರನ್ನು ಬಂದರು ಮಂಡಳಿ ಟ್ರಸ್ಟೀಗಳು ಒತ್ತಾಯಿಸಿದ್ದಾರೆ.
ರಾಜಕಾರಣಿಗಳ ಹಾಗೂ ನೌಕರಶಾಹಿಯ ಬೆಂಬಲ ಪಡೆದಿರುವ ಅಧ್ಯಕ್ಷರು ತನಿಖಾ ಅಧಿಕಾರಿಗಳ ಮೇಲೆ ಪ್ರಭಾವಬೀರುವ ಸಾಧ್ಯತೆಗಳು ಇವೆ. ಹೀಗಾಗಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ತನಿಖಾದಳಕ್ಕೆ ಸೂಚಿಸಬೇಕು ಎಂದು ನವಮಂಗಳೂರು ಬಂದರು ಮಂಡಳಿಯ ಟ್ರಸ್ಟಿ ಡೇಸಾ ಒತ್ತಾಯಿಸಿದ್ದಾರೆ.
ಎನ್ಎಂಪಿಟಿಯು ದಿನವೊಂದಕ್ಕೆ 1.5 ಲಕ್ಷ ರು. ಬಾಡಿಗೆಗೆ ಟಗ್ ಒಂದನ್ನು ಪಡೆದಿದೆ. ಇದರಲ್ಲಿ ಕ್ಯಾಪ್ಟನ್ರಾಂಕುಮಾರ್ ಮತ್ತು ಡೆಪ್ಯುಟಿ ಕನ್ಸರ್ವೇಟರ್ ಸುಭಾಷ್ ಕುಮಾರ್ ಕಮಿಷನ್ ಪಡೆಯುತ್ತಿದ್ದಾರೆ. ಹಾಲಿ ಇರುವ ಆಡಳಿತ ಕಚೇರಿಯಲ್ಲಿ ಶೇಕಡಾ 40 ಜಾಗ ಖಾಲಿ ಇದ್ದರೂ, ಹೊಸ ಆಡಳಿತ ಕಚೇರಿ ಕಟ್ಟಡ ಕಟ್ಟಲು 15 ಕೋಟಿ ರುಪಾಯಿ ವೆಚ್ಚಮಾಡಲಾಗಿದೆ ಎಂದು ಮತ್ತೊಬ್ಬ ಟ್ರಸ್ಟೀ ಓಸ್ವಾಲ್ಡ್ ಫೆರ್ನಾಂಡಿಸ್ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
ಬಂದರು ಮಂಡಳಿ ನೇಮಕಾತಿಯಲ್ಲಿ ಸಹ ಭ್ರಷ್ಟಾಚಾರ, ಅವ್ಯವಹಾರಗಳು ನಡೆದಿವೆ. ಎನ್.ಎಂ.ಪಿ.ಟಿ ಅಧ್ಯಕ್ಷರು ಹಾಗೂ ಅವರ ಪತ್ನಿ ಬಳಿ 4 ಹವಾನಿಯಂತ್ರಿತ ಕಾರುಗಳಿವೆ. ದೆಹಲಿ, ಬೆಂಗಳೂರು, ಮುಂಬಯಿ, ಗೋವಾಗಳಲ್ಲಿ ಭಾರಿ ಪ್ರಮಾಣದ ಆಸ್ತಿ ಹೊಂದಿದ್ದಾರೆ. ಈ ಬಗ್ಗೆಯೂ ಸಮಗ್ರ ತನಿಖೆ ನಡೆಸುವಂತೆ ಕೇಂದ್ರೀಯ ಜಾಗೃತ ದಳ ಆಯುಕ್ತರಿಗೆ ದೂರು ನೀಡಲಾಗಿದೆ ಎಂದೂ ಅವರು ಹೇಳಿದರು.
(ಮಂಗಳೂರು ಪ್ರತಿನಿಧಿಯಿಂದ)
ಮುಖಪುಟ / ಇವತ್ತು... ಈ ಹೊತ್ತು...