ಹಪ್ಪಳ, ಸಂಡಿಗೆ ಒಣಗಿಸುತಿಹರು ಮಾನಿನಿಯರು
ಬೆಂಗಳೂರು : ಬೆಂಗಳೂರಿನಲ್ಲಿ ಗುರುವಾರದ ತಾಪಮಾನ 32 ಡಿಗ್ರಿ ಇತ್ತು. ಆದರೆ, ಮುಂದಿನ 24 ಗಂಟೆಗಳಲ್ಲಿ ತಾಪಮಾನ 34 ಮುಟ್ಟಲಿದೆ ಎನ್ನುವ ಸೂಚನೆಯನ್ನು ಹವಾಮಾನ ವೀಕ್ಷಣಾಲಯ ನೀಡಿದೆ. ಅಂದರೆ, ಬಿಸಿಲು ಏರುತ್ತಿದೆ. ರಾಜ್ಯದಲ್ಲೂ ಬಿಸಿಲಿನದೇ ಕಾರುಭಾರು.
ಬಾಳೆಹೊನ್ನೂರಿನಲ್ಲಿ 1 ಸೆಂಟಿ ಮೀಟರ್ ಮಳೆ ಆಗಿದೆ ಎನ್ನುವುದನ್ನು ಬಿಟ್ಟರೆ, ಉಳಿದಂತೆ ಬಹುತೇಕ ಎಲ್ಲೆಡೆ ಬಿಸಿಲು. ಉತ್ತರ ಒಳನಾಡಿನಲ್ಲಿ ಒಣಹವೆ ಮೂಡಿತ್ತು. ಕರಾವಳಿಯಲ್ಲಿ ಒಣಹವೆ ಮುಂದುವರಿದಿತ್ತು. ದಕ್ಷಿಣ ಒಳನಾಡಿನ ಕೆಲವೆಡೆ ಮಾತ್ರ ಗರಿಷ್ಠ ತಾಪಮಾನ ಕೊಂಚ ಇಳಿದಿತ್ತು.
ರಾಜ್ಯದ ಅತ್ಯಧಿಕ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ಗುಲ್ಬರ್ಗಾದಲ್ಲಿ ದಾಖಲಾಗಿದೆ. ಮುನ್ಸೂಚನೆಯಂತೆ ರಾಜ್ಯದಲ್ಲಿ ಮುಖ್ಯವಾಗಿ ಒಣಹವೆ ಇರಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಪ್ರಮುಖವಾಗಿ ಶುಭ್ರಆಕಾಶ ಇದ್ದು ದಿನದ ಗರಿಷ್ಠ ತಾಪಮಾನ 34 ಡಿಗ್ರಿಗೆ ಏರುವ ಸಾಧ್ಯತೆ ಇದೆ.
ಅಕಾಲಿಕವಾಗಿ ಸುರಿದ ಏಪ್ರಿಲ್ ಮಳೆಯಿಂದ ಹಪ್ಪಳ ಸಂಡಿಗೆ ಒಣಗಿಸಲಾಗದೆ ಪರಿತಪಿಸುತ್ತಿದ್ದವರು, ಮತ್ತೆ ಮಹಡಿಯ ಮೇಲೆ ವರ್ಷಕ್ಕಾಗುವಷ್ಟು ಹಪ್ಪಳ, ಸಂಡಿಗೆ, ಬಾಳಕ ಒಣಗಿಸುವ ತರಾತುರಿಯಲ್ಲಿದ್ದಾರೆ.