ಚುನಾವಣೆ ಪ್ರಚಾರಕ್ಕೆ ತಮಿಳುನಾಡು, ಕೇರಳದಿಂದ ಕೃಷ್ಣರಿಗೆ ಬುಲಾವ್
ಬೆಂಗಳೂರು : ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಾ ಕರ್ನಾಟಕದ ಕೀರ್ತಿಯನ್ನು ವಿಶ್ವಾದ್ಯಂತ ಹಬ್ಬಿಸುತ್ತಿರುವ ಮುಖ್ಯಮಂತ್ರಿ ಕೃಷ್ಣ ಅವರ ತಾರಾಮೌಲ್ಯ ಏರಿದೆ. ಎಸ್.ಎಂ. ಕೃಷ್ಣ ಅವರಿಗೆ ಕರ್ನಾಟಕದಲ್ಲಷ್ಟೇ ಅಲ್ಲ ಹೊರ ರಾಜ್ಯ - ಹೊರ ರಾಷ್ಟ್ರಗಳಲ್ಲೂ ಅಭಿಮಾನಿಗಳಿದ್ದಾರೆ. ಕಾಂಗ್ರೆಸ್ ಪಕ್ಷ ಕೃಷ್ಣರನ್ನು ಒಬ್ಬ ರಾಷ್ಟ್ರೀಯ ನಾಯಕ ಎಂದು ಗುರುತಿಸಿದೆ.
ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಕಾಂಗ್ರೆಸ್ ಅಧ್ಯಕ್ಷ ಇಳಂಗೋವನ್ ಅವರು ಬುಧವಾರ ಕೃಷ್ಣ ಅವರನ್ನು ಭೇಟಿ ಮಾಡಿ, ತಮಿಳುನಾಡಿಗೆ ಆಗಮಿಸಿ ಪಕ್ಷದ ಪರ ಪ್ರಚಾರ ಮಾಡುವಂತೆ ಕೋರಿದ್ದಾರೆ. ಕೃಷ್ಣರ ಅಧಿಕೃತ ನಿವಾಸ ಅನುಗ್ರಹದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಇಳಂಗೋವನ್ ಕರ್ನಾಟಕದ ಗಡಿ ಭಾಗಗಳಲ್ಲಿ ಪ್ರವಾಸ ಕೈಗೊಂಡು ಕಾಂಗ್ರೆಸ್ ಪರ ಪ್ರಚಾರ ಮಾಡುವಂತೆ ಪ್ರಾರ್ಥಿಸಿದರು. ಕೇರಳ ಹಾಗೂ ಪಾಂಡಿಚೇರಿಯ ಕಾಂಗ್ರೆಸ್ ಅಧ್ಯಕ್ಷರಿಂದಲೂ ಕೂಡ ಕೃಷ್ಣ ಅವರಿಗೆ ಕೋರಿಕೆ ಬಂದಿದೆ.
ಈ ಮೂರೂ ರಾಜ್ಯಗಳ ಕಾಂಗ್ರೆಸ್ ನಾಯಕರ ಕೋರಿಕೆಯನ್ನು ಮನ್ನಿಸಿರುವ ಕೃಷ್ಣ , ಪಾಂಡಿಚೇರಿ, ಕೇರಳ ಹಾಗೂ ತಮಿಳುನಾಡಿನ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ಕೇರಳದಲ್ಲಿ ನಾಲ್ಕು ದಿನ ಪ್ರಚಾರ ಕಾರ್ಯ ಕೈಗೊಳ್ಳುವುದಾಗಿ ಸ್ವತಃ ಕೃಷ್ಣ ಅವರೇ ತಿಳಿಸಿದ್ದಾರೆ. ಆದರೆ, ಪ್ರಚಾರಕ್ಕೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಇಲ್ಲಿ ನಡೆದ ಸಮಾರಂಭವೊಂದರ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಔಪಚಾರಿಕವಾಗಿ ಮಾತನಾಡುತ್ತಾ ಮುಖ್ಯಮಂತ್ರಿ ಈ ವಿಷಯ ತಿಳಿಸಿದರು. ಜಯಲಲಿತಾ ಅವರ ನಾಮಪತ್ರ ತಿರಸ್ಕೃತವಾಗಿರುವುದು ಎಐಡಿಎಂಕೆ ಹಾಗೂ ಕಾಂಗ್ರೆಸ್ನ ಚುನಾವಣೆ ಹೊಂದಾಣಿಕೆಯ ಮೇಲೆ ಪರಿಣಾಮಬೀರದು ಎಂದೂ ಹೇಳಿದರು.
ಕುಮಾರಿ ಜಯಲಲಿತಾ ಅವರ ನಾಮಪತ್ರ ತಿರಸ್ಕೃತವಾಗಿರುವುದರಿಂದ ತಮಿಳುನಾಡು ಕಾಂಗ್ರೆಸ್ ಪಕ್ಷದ ಮೇಲಾಗಲೀ ಅಥವಾ ವಿಧಾನಸಭಾ ಚುನಾವಣೆಯ ಫಲಿತಾಂಶದ ಮೇಲಾಗಲೀ ಯಾವುದೇ ಪ್ರತಿಕೂಲ ಪರಿಣಾಮಬೀರದು ಎಂದೂ ಕೃಷ್ಣ ಹೇಳಿದರು.