ರಾಜ್ಯದ ರಸ್ತೆ ಸಪಾಟಿಗೆ ವಿಶ್ವಬ್ಯಾಂಕ್ನದಾಖಲೆ ಸಹಾಯಹಸ್ತ
ಬೆಂಗಳೂರು : ‘ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಶ್ವಬ್ಯಾಂಕ್ 1635 ಕೋಟಿ ರುಪಾಯಿ ನೆರವನ್ನು ರಾಜ್ಯದ ರಸ್ತೆ ಅಭಿವೃದ್ಧಿಗೆ ಸಾಲವಾಗಿ ಕೊಟ್ಟಿದೆ. ಕಾಮಗಾರಿ ಸಚಿವ ಧರ್ಮಸಿಂಗ್ ಹಾಗೂ ಕಾಮಗಾರಿ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಮಣ್ಯಂ ಅವರಿಗೆ ಧನ್ಯವಾದಗಳು’.
ಮಂಗಳವಾರ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸುದ್ದಿಗೋಷ್ಠಿಯಲ್ಲಿ ಸಂತೋಷದಿಂದ ಆಡಿದ ಮಾತುಗಳಿವು. ರಾಜ್ಯದ 2300 ಕಿ.ಮೀ. ಉದ್ದದ ರಸ್ತೆಗಳು ಈ ನೆರವಿನಿಂದ ಸಪಾಟಾಗಲಿವೆ. ಒಂದು ಸಾವಿರ ಕಿ.ಮೀ. ಉದ್ದದ ರಸ್ತೆಯ ಮೇಲ್ದರ್ಜೆ ಹಾಗೂ 1300 ಕಿ.ಮೀ. ಉದ್ದ ರಸ್ತೆಯ ಪುನರಾಭಿವೃದ್ಧಿ ಕಾರ್ಯ ಬರುವ ಸೆಪ್ಟೆಂಬರ್ ತಿಂಗಳಿಂದಲೇ ಪ್ರಾರಂಭವಾಗಲಿದೆ ಎಂದು ಮುಖ್ಯಮಂತ್ರಿ ಕೃಷ್ಣ ಹೇಳಿದರು.
ರಸ್ತೆ ಸಪಾಟಾಗಿಸುವಿಕೆ ಕುರಿತಂತೆ 2030 ಕೋಟಿ ರುಪಾಯಿಗಳ ಸಮಗ್ರ ಯೋಜನೆಯನ್ನು ಸಿದ್ಧಪಡಿಸಿ, ವಿಶ್ವ ಬ್ಯಾಂಕ್ನಿಂದ ಅದರ 80 ಪ್ರತಿಶತ ಹಣ ಕಾಸಿನ ನೆರವನ್ನು ಸರ್ಕಾರ ಯಾಚಿಸಿತ್ತು . ಕಾಮಗಾರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಮಣ್ಯಂ ವಾಷಿಂಗ್ಟನ್ಗೆ ತೆರಳಿ ವಿಶ್ವಬ್ಯಾಂಕ್ ಅಧಿಕಾರಿಗಳ ಮನವೊಲಿಸಿ, ರಾಜ್ಯಕ್ಕೆ ನೆರವು ಹರಿಸುವಲ್ಲಿ ಶ್ರಮಿಸಿದ್ದಾರೆ. 20 ತಿಂಗಳ ಸುದೀರ್ಘ ಮಾತುಕತೆಯ ಫಲ ವಿಶ್ವಬ್ಯಾಂಕ್ನ ಈ ನೆರವು ಎಂದರು.
ದೊಡ್ಡ ಯೋಜನೆಯ ಪುಟಪುಟಗಳು...
ಗೋಷ್ಠಿಯಲ್ಲಿ ಮಾತನಾಡಿದ ಕಾಮಗಾರಿ ಸಚಿವ ಧರಂ ಸಿಂಗ್ ಯೋಜನೆಯ ರೂಪುರೇಷೆಯನ್ನು ವಿವರಿಸಿದ್ದು ಹೀಗೆ...
- 4 ವರ್ಷಗಳಲ್ಲಿ ಎಲ್ಲಾ ಕಾಮಗಾರಿಗಳು ಪೂರ್ಣವಾಗುತ್ತವೆ
- ವಿಶ್ವಬ್ಯಾಂಕ್ ನೆರವಿನ ಜತೆಗೆ ರಾಜ್ಯ ಸರ್ಕಾರ ಯೋಜನೆಗಾಗಿ 395 ಕೋಟಿ ರುಪಾಯಿ ವೆಚ್ಚ ಮಾಡಲಿದೆ
- ರಸ್ತೆ ಸುರಕ್ಷತೆಗೆ 18 ಕೋಟಿ ರುಪಾಯಿ, ಪರಿಸರ ಸಂರಕ್ಷಣೆಗೆ 20 ಕೋಟಿ ರುಪಾಯಿ ಹಾಗೂ ಪುನರ್ವಸತಿಗಾಗಿ 31 ಕೋಟಿ ರುಪಾಯಿ ಮೀಸಲಿಡಲಾಗುವುದು
- ಜಾಗತಿಕ ಮಟ್ಟದ ಟೆಂಡರ್ ಕರೆದು, ಕಾಮಗಾರಿಯ ಗುತ್ತಿಗೆ ನೀಡಲಾಗುವುದು. ಗುತ್ತಿಗೆದಾರರು ಬೇರೆಯವರಿಗೆ ಕೆಲಸ ಹಚ್ಚದೆ, ತಾವೇ ಕಾಮಗಾರಿ ನಿರ್ವಹಿಸಬೇಕು
- ಯೋಜನೆಯ ಮೊದಲ ಹಂತದಲ್ಲಿ 1 ಲಕ್ಷ ಗಿಡ ಬೆಳೆಸಲಾಗುವುದು
- ಲೋಕೋಪಯೋಗಿ ಇಲಾಖೆಯನ್ನು ಪೂರ್ಣ ಪ್ರಮಾಣದಲ್ಲಿ ಗಣಕೀಕರಣಗೊಳಿಸಲಾಗುವುದು
- ಯೋಜನೆಯ ಮೊದಲ ಹಂತದಲ್ಲಿ ತೊಂದರೆಗೆ ಒಳಗಾಗಿರುವ 753 ಕುಟುಂಬಗಳಿಗೆ ನೆರವು ಕಲ್ಪಿಸುತ್ತೇವೆ
- ಹೆದ್ದಾರಿ ಪ್ರಾಧಿಕಾರ ಹಾಗೂ ರಸ್ತೆ ಬಳಕೆದಾರರ ಮಂಡಳಿ ಸ್ಥಾಪಿಸಿ, ಪ್ರತಿವರ್ಷ ರಸ್ತೆಯ ಸ್ಥಿತಿ-ಗತಿಗಳ ಬಗ್ಗೆ ಸಮೀಕ್ಷೆ ನಡೆಸಲಾಗುವುದು
- ಜೂನ್ ಹೊತ್ತಿಗೆ ವಿಶ್ವಬ್ಯಾಂಕ್ ಮಂಜೂರು ಮಾಡಿರುವ ಈ ಸಾಲ ರಾಜ್ಯದ ಕೈ ಸೇರಲಿದೆ
- ಹುಡ್ಕೋ ಮತ್ತಿತರ ಸಂಸ್ಥೆಗಳ ನೆರವಿನಿಂದ ರಾಜ್ಯದ 11,600 ಕಿಲೋಮೀಟರ್ ಉದ್ದ ರಸ್ತೆಯನ್ನು ಅಭಿವೃದ್ಧಿಗೊಳಿಸುವ ಯೋಜನೆ ರೂಪಿಸಿ, ಅದನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ.