ಪಶ್ಚಿಮ ಘಟ್ಟ ಬೇಕಿದ್ದರೆ ಗಂಗಡಿಕಲ್ಲುನೆಲ್ಲಿಬೀಡಿನಲ್ಲಿ ಗಣಿಗಾರಿಕೆ ಬೇಡ
ಬೆಂಗಳೂರು : ತುಂಗಾ, ಭಧ್ರಾ ಮತ್ತು ನೇತ್ರಾವತಿ ನದಿಗಳ ಉಗಮಸ್ಥಾನ ಗಂಗಡಿ ಕಲ್ಲು ಮತ್ತು ನೆಲ್ಲಿ ಬೀಡು ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಕೂಡದು ಎಂದು ಪರಿಸರ ಪರಿಣಾಮ ಮಾಪನ ವರದಿ ಹೇಳಿದೆ.
ಗಂಗಡಿಕಲ್ಲು ಮತ್ತು ನೆಲ್ಲಿಬೀಡಿನಲ್ಲಿ ಗಣಿಗಾರಿಕೆ ಮುಂದುವರೆಸಿದರೆ, ವಿಶ್ವದ 18 ವೈವಿಧ್ಯಮಯ ಜೀವಸಂಕುಲ ಕೇಂದ್ರಗಳಲ್ಲಿ ಒಂದಾಗಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ ಪ್ರಾಣಿ ಹಾಗೂ ಸಸ್ಯ ಸಂಕುಲಕ್ಕೆ ಹಾನಿಯಾಗಲಿದೆ ಎಂದು ವರದಿ ಹೇಳಿದೆ. ಇದರಿಂದ ಕಬ್ಬಿಣ ಅದಿರು ಗಣಿಗಾರಿಕೆ ನಡೆಸುತ್ತಿರುವ ಕೇಂದ್ರ ಸರಕಾರ ಸ್ವಾಮ್ಯದ, ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯ ಭವಿಷ್ಯ ಮತ್ತೆ ತೂಗುಯ್ಯಾಲೆಯಲ್ಲಿದೆ.
ವರದಿಯಲ್ಲಿನ ಮುಖ್ಯ ಅಂಶಗಳು :
- ಗಂಗಡಿಕಲ್ಲು ಪ್ರದೇಶದಲ್ಲಿ ಇನ್ನಷ್ಟು ಗಣಿಗಾರಿಕೆ ನಡೆಸುವುದರಿಂದ ತುಂಗಾ ನದಿ ಪಾತ್ರಕ್ಕೆ ಹಾನಿ
- ರಾಷ್ಟ್ರೀಯ ಉದ್ಯಾನವನದ ದಕ್ಷಿಣ ಮತ್ತು ಉತ್ತರ ಭಾಗಗಳ ಎತ್ತರ ಪ್ರದೇಶಕ್ಕೂ ಶಾಶ್ವತ ತೊಂದರೆ.
- ಉದ್ಯಾನದ ಪಕ್ಕದಲ್ಲಿರುವ 321 ಹೆಕ್ಟೇರ್ ಹುಲ್ಲುಗಾವಲು ಹಾಗೂ ವಿಶಿಷ್ಟ ಶೋಲಾ ಅರಣ್ಯದ ಮೇಲೆ ದುಷ್ಪರಿಣಾಮ
- ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿರುವ ಪ್ರಾಣಿ, ಸಸ್ಯ ಮತ್ತು ಜಲಚರ ಸಂಪನ್ಮೂಲಕ್ಕೆ ತೊಂದರೆ
ಕೆಐಓಸಿಎಲ್
ಕುದುರೆಮುಖ ಕಬ್ಬಿಣ ಅದಿರು ಗಣಿಗಾರಿಕಾ ಕಂಪೆನಿಗೆ, ಗಣಿಗಾರಿಕೆ ನಡೆಸಲು ನೀಡಿದ್ದ 30 ವರ್ಷಗಳ ಗುತ್ತಿಗೆ ಅವಧಿ 1999ರ ಜೂನ್ 25ಕ್ಕೆ ಮುಗಿದಿತ್ತು. ನಂತರ ಒಂದು ವರ್ಷದವರೆಗೆ ಗುತ್ತಿಗೆ ಅವಧಿಯನ್ನು ವಿಸ್ತರಿಸಲಾಗಿತ್ತು. ಆದರೆ, ಗಂಗಡಿಕಲ್ಲು ಮತ್ತು ನೆಲ್ಲಿ ಬೀಡು ಪ್ರದೇಶಗಳಲ್ಲಿಯೂ ಗಣಿಗಾರಿಕೆ ನಡೆಸಲು, ಮತ್ತೆ 20 ವರ್ಷಗಳವರೆಗೆ ಗುತ್ತಿಗೆ ಅವಧಿ ವಿಸ್ತರಿಸುವಂತೆ ಕಂಪೆನಿಯು ಸರಕಾರವನ್ನು ಕೇಳಿಕೊಂಡಿತ್ತು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...