ಬಜೆಟ್ಗೆ ಅಸ್ತು ! ಪ್ರಧಾನಿ ಮನವಿಗೆ ಸೊಪ್ಪು ಹಾಕದಸೋನಿಯಾ
ನವದೆಹಲಿ : ಸಂಸತ್ತಿನಲ್ಲಿ ತಲೆದೋರಿರುವ ಕಗ್ಗಂಟನ್ನು ಬಿಡಿಸಿ, ಕೇಂದ್ರ ಬಜೆಟ್ ಅಂಗೀಕಾರಕ್ಕೆ ಅನುವು ಮಾಡಿಕೊಡುವಂತೆ ಪ್ರಧಾನಿ ವಾಜಪೇಯಿ ಮಾಡಿಕೊಂಡಿದ್ದ ಮನವಿಯನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.
ತೆಹಲ್ಕಾ ಬಯಲು ಮಾಡಿದ ಹಗರಣಗಳ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿ ಸಭೆ ರಚಿಸುವ ಕುರಿತಾದ ತಮ್ಮ ಒತ್ತಾಯಕ್ಕೆ ಸೋನಿಯಾ ಅಂಟಿಕೊಂಡಿರುವುದಾಗಿ ಕಾಂಗ್ರೆಸ್ ಮೂಲಗಳು ಸ್ಪಷ್ಟಪಡಿಸಿವೆ. ಸೋಮವಾರ ಬೆಳಿಗ್ಗೆ ಸಭೆ ಸೇರಿದ ಕಾಂಗ್ರೆಸ್ನ ಸಂಸದೀಯ ಮಂಡಳಿ ಸಭೆ ಈ ಕುರಿತಾದ ನಿರ್ಣಯ ಕೈಗೊಂಡಿದೆ. ಇದರಿಂದಾಗಿ, ಸಂಸತ್ತು ಹಾಗೂ ಕೇಂದ್ರ ಆಯವ್ಯಯ ಮತ್ತಷ್ಟು ಕಾಲ ಅಡಕತ್ತರಿಯಲ್ಲೇ ಮುಂದುವರಿಯುವುದು ಸ್ಪಷ್ಟವಾಗಿದೆ.
ಭಾನುವಾರ ರಾತ್ರಿ ಪ್ರಧಾನಿ ವಾಜಪೇಯಿ, ಸೋನಿಯಾಗೆ ಬರೆದ ಪತ್ರದಲ್ಲಿ ಸಂಸತ್ತಿನಲ್ಲಿನ ಅಸಹಕಾರವನ್ನು ಕೈಬಿಟ್ಟು ಬಜೆಟ್ ಅಂಗೀಕಾರಕ್ಕೆ ಕಾಂಗ್ರೆಸ್ ಪಕ್ಷ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದರು. ಸಂಸತ್ತು ತೀರಾ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿರುವ ಬಗ್ಗೆ ಪ್ರಧಾನಿ ತಮ್ಮ ಅಳಲು ತೋಡಿಕೊಂಡಿದ್ದರು.
ಲೋಕಸಭೆ ಕಲಾಪ ಮಂಗಳವಾರಕ್ಕೆ ಮುಂದೂಡಿಕೆ
ಸೋಮವಾರ ಬೆಳಿಗ್ಗೆ ಕಲಾಪ ಆರಂಭಗೊಂಡ ಕೂಡಲೇ ಯಥಾ ಪ್ರಕಾರ ಸದನದ ಬಾವಿಗೆ ಧುಮುಕಿದ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ತೆಹಲ್ಕಾ ಪ್ರಕರಣ ತನಿಖೆಗೆ ಸಂಸದೀಯ ಸಮಿತಿ ರಚಿಸುವಂತೆ ಒತ್ತಾಯಿಸಿದರು. ಸಭೆಯಲ್ಲಿ ತೀವ್ರ ಕೋಲಾಹಲ ಉಂಟಾದ್ದರಿಂದ ಲೋಕಸಭೆಯ ಉಪ ನಾಯಕ ಸಯೀದ್, ಸದನವನ್ನು ಮಂಗಳವಾರಕ್ಕೆ ಮುಂದೂಡಿದರು.
(ಇನ್ಫೋ ವಾರ್ತೆ)