ನವ ಮಂಗಳೂರು ಬಂದರಿಗೆ ಸಿಬಿಐ ತನಿಖಾ ತಂಡದ ಭೇಟಿ
ಮಂಗಳೂರು : ನವ ಮಂಗಳೂರು ಬಂದರು ಮಂಡಳಿಗೆ ಹಠಾತ್ ಭೇಟಿ ನೀಡಿದ ಸಿಬಿಐ ಅಧಿಕಾರಿಗಳು ಕಚೇರಿಯಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಸಿಬಿಐಯ ಡಿವೈಎಸ್ಪಿ ಗುರುಪ್ರಸಾದ್ ನೇತೃತ್ವದಲ್ಲಿ ಮೂವರು ಇನ್ಸ್ಪೆಕ್ಟರ್ಗಳನ್ನೊಳಗೊಂಡ ಇಪ್ಪತ್ತು ಮಂದಿಯ ತಂಡ ಶೋಧ ಕಾರ್ಯ ನಡೆಸುತ್ತಿದೆ. ಅಧಿಕಾರಿಗಳ ತಂಡ ತಣ್ಣೀರು ಬಾವಿ ಗೆಸ್ಟ್ ಹೌಸಿನಲ್ಲಿ ತಂಗಿದ್ದು ಬಂದರು ಮಂಡಳಿಯ ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸುತ್ತಿದೆ.
ಶನಿವಾರ , ಸಿಬಿಐ ತಂಡವು ಬಂದರು ಮಂಡಳಿ ಉಪಾಧ್ಯಕ್ಷ ಮೊಹಂತಿ , ಹಣಕಾಸು ವಿಭಾಗದ ಭಾಸ್ಕರಾಚಾರ್, ಕ್ಯಾಪ್ಟನ್ ಸುಭಾಷ್ ಕುಮಾರ್, ಎಂಜಿನಿಯರ್ ಟಿ. ಆರ್. ಭಟ್ ಸೇರಿದಂತೆ ಹಲವು ಅಧಿಕಾರಿಗಳನ್ನು ಪ್ರಶ್ನಿಸಿದೆ.
ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ. ಆದಾಯ ಸೋರಿಕೆಯಾಗಿದೆ ಎಂಬ ದೂರುಗಳ ಬಗ್ಗೆಯೂ ತನಿಖಾ ತಂಡ ಮಾಹಿತಿ ಸಂಗ್ರಹಿಸಿದೆ. ಆದರೆ ಈ ಕುರಿತ ಯಾವುದೇ ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ.
(ಮಂಗಳೂರು ಪ್ರತಿನಿಧಿಯಿಂದ)