ಮಂಗಳೂರಿನ ಸನಾತನ ನಾಟ್ಯಾಲಯದಿಂದನೃತ್ಯ ವರ್ಷ- 2001
ಮಂಗಳೂರು : ಪಾಪ್ ಸಂಗೀತ ಯುಗದಲ್ಲಿ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಜನ ಮಾನಸದಿಂದ ಹಿಂದೆ ಸರಿಯುತ್ತಿರುವ ಹಿನ್ನೆಲೆಯಲ್ಲಿ ಶಾಸ್ತ್ರೀಯ ನಾಟ್ಯಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ಮಂಗಳೂರಿನ ಸನಾತನ ನಾಟ್ಯಾಲಯ, ನೃತ್ಯ ವರ್ಷ- 2001 ಕಾರ್ಯಕ್ರಮವನ್ನು ಏಪ್ರಿಲ್ 22ರ ಭಾನುವಾರ ನಗರದ ಟೌನ್ ಹಾಲ್ನಲ್ಲಿ ಹಮ್ಮಿಕೊಂಡಿದೆ.
ಇದು ಶಾಸ್ತ್ರೀಯ ನೃತ್ಯಕಲೆಗಳನ್ನು ಪೋಷಿಸಿಕೊಂಡು ಬರುತ್ತಿರುವ ನಾಟ್ಯಾಲಯ ಆಯೋಜಿಸುತ್ತಿರುವ ನಾಲ್ಕನೇ ವರ್ಷದ ಕಾರ್ಯಕ್ರಮ. ನಾಟ್ಯಾಲಯದಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅಂದು ಸಂಜೆ ಆರು ಗಂಟೆಗೆ ಭರತನಾಟ್ಯ ನೃತ್ಯ ಪ್ರದರ್ಶನ ನೀಡುವರು.
ಕಾರ್ಯಕ್ರಮದಲ್ಲಿ ಷಷ್ಟ್ಯಬ್ಧಿ ಆಚರಿಸುತ್ತಿರುವ ಉಡುಪಿಯ ಸಮೂಹ ಸಂಯೋಜಕ ಸಾಹಿತಿ ಉದ್ಯಾವರ ಮಾಧವ ಆಚಾರ್ಯರನ್ನೂ ಸನ್ಮಾನಿಸಲಾಗುವುದು. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಮತ್ತು ಉದಯವಾಣಿಯ ಎ. ಈಶ್ವರಯ್ಯ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಾ. ಸ್ವರೂಣ್ ರಾಜ್, ಅಕ್ಷತಾ .ಬಿ, ಎಸ್. ಭಾವನಾ ಪಾಂಗಾಳ್, ಸುಮೇಧಾ ಬಲ್ಲಾಳ್, ಅನುರಾಧಾ ಶೇಟ್ ಅವರು ಕಾರ್ಯಕ್ರಮದಲ್ಲಿ ಭರತ ನಾಟ್ಯ ಪ್ರದರ್ಶನ ನೀಡಲಿದ್ದಾರೆ.
(ಇನ್ಫೋ ವಾರ್ತೆ)