ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ತಂಗುದಾಣ ನಿರ್ಮಾಣ
ಹಾಸನ : ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಆಯ್ದ ಸ್ಥಳಗಳಲ್ಲಿ ಹೊಟೆಲ್ ಮಾದರಿಯ ತಂಗುದಾಣಗಳನ್ನು ನಿರ್ಮಿಸಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಆರ್. ರೋಷನ್ ಬೇಗ್ ಇಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಹರಿಯಾಣ ರಾಜ್ಯ ಸರಕಾರ ಪ್ರವಾಸಿಗರಿಗೆ ಸಕಲ ಅನುಕೂಲತೆ ಕಲ್ಪಿಸುವ ನಿಟ್ಟಿನಲ್ಲಿ ದಿಟ್ಟಹೆಜ್ಜೆ ಇಟ್ಟಿದೆ, ರಾಜ್ಯ ಕೂಡ ಹರಿಯಾಣವನ್ನು ಅನುಸರಿಸಲಿದೆ ಎಂದೂ ಅವರು ಹೇಳಿದರು. ಪ್ರವಾಸಿ ಕೇಂದ್ರಗಳನ್ನು ಹಾಗೂ ಪ್ರವಾಸಿಗರ ಸಂರಕ್ಷಣೆಗಾಗಿ ಪ್ರತ್ಯೇಕ ಪೊಲೀಸರನ್ನು ನೇಮಕ ಮಾಡುವ ಬಗ್ಗೆ ಚಿಂತಿಸಲಾಗುತ್ತಿದ್ದು, ಅತಿ ಶೀಘ್ರದಲ್ಲೇ ಪೊಲೀಸ್ ಪಡೆ ರಚಿಸಲಾಗುವುದು ಎಂದರು.
ರಾಜ್ಯ - ರಾಷ್ಟ್ರೀಯ ಹೆದ್ದಾರಿಯ ಬಳಿ ಸ್ಥಾಪಿಸಲಾಗುವ ತಂಗುದಾಣಗಳಲ್ಲಿ ಶೌಚಾಲಯ, ಉತ್ತಮ ಊಟ, ವಸತಿ, ಮಿನಿ ಮಾರುಕಟ್ಟೆ ಅನುಕೂಲತೆ ಒದಗಿಸುವ ಮೂಲಕ ರಾಜ್ಯಕ್ಕೆ ಬರುವ ದೇಶೀ ಹಾಗೂ ವಿದೇಶಿ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲತೆ ಕಲ್ಪಿಸಲು ರಾಜ್ಯ ಸರಕಾರ ಉದ್ದೇಶಿಸಿದೆ.
ಪ್ರವಾಸಿಗರಿಗೆ ಹೆಚ್ಚಿನ ಅನುಕೂಲತೆಗಳಿದ್ದರೆ, ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತದೆ ಎಂದ ಅವರು, ಕರ್ನಾಟಕ ಒಂದು ಉತ್ತಮ ಪ್ರವಾಸಿ ತಾಣ. ಸ್ಮಾರಕಗಳ ತವರು. ನಮ್ಮ ರಾಷ್ಟ್ರದ ಸಂಪತ್ತಾದ ಈ ಸ್ಮಾರಕ, ದೇಗುಲ ಹಾಗೂ ಪ್ರವಾಸಿ ತಾಣಗಳನ್ನು ಶುಚಿಯಾಗಿ ಇಡುವುದಲ್ಲದೆ ಸಂರಕ್ಷಿಸುವ ಜವಾಬ್ದಾರಿ ಪ್ರತಿಯಾಬ್ಬ ನಾಗರಿಕರದು ಎಂದರು.
ಮಲ್ಪೆ ಅಭಿವೃದ್ಧಿ : ಕರ್ನಾಟಕದ ಸುಪ್ರಸಿದ್ಧ ಬೀಚ್ಗಳಲ್ಲಿ ಒಂದಾದ ಮಲ್ಪೆ, ಮರವಂತೆ ಸೇರಿದಂತೆ ಸಮುದ್ರತೀರದಲ್ಲಿರುವ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ರಾತ್ರಿಯ ವೇಳೆ ಸಹ ಪ್ರಕೃತಿ ಸೌಂದರ್ಯವನ್ನು ಸವಿಯುವಂತೆ ಮಾಡಲು 80 ಲಕ್ಷ ರುಪಾಯಿ ವೆಚ್ಚದಲ್ಲಿ ವಿದ್ಯುತ್ದೀಪಗಳನ್ನು ಅಳವಡಿಸಲಾಗುವುದು ಎಂದರು.
ಗೊರುರು ಪ್ರದೇಶಾಭಿವೃದ್ಧಿ : ಹಾಸನ ಜಿಲ್ಲೆಯ ಗೊರೂರು ಜಲಾಶಯ ಪ್ರದೇಶವನ್ನು ಅಭಿವೃದ್ಧಿ ಪಡಿಸಿ, ಒಂದು ಉತ್ತಮ ಪ್ರವಾಸಿ ಕೇಂದ್ರ ಮಾಡುವ ಯೋಜನೆಯನ್ನು ಸರಕಾರ ರೂಪಿಸಿದ್ದು, ಇಲ್ಲಿ ಸಾಹಸ, ಜಲಕ್ರೀಡೆ ಮೊದಲಾದ ಸೌಲಭ್ಯ ಒದಗಿಸಲಾಗುವುದು . ಇದಕ್ಕಾಗಿ ಪೂರ್ವಭಾವಿ ಮಾತುಕತೆಗಳು ನಡೆದಿದೆ ಎಂದರು.
ಶ್ರೀಕಂಠೇಶ್ವರನ ಸನ್ನಿಧಿ ನಂಜನಗೂಡು ಬಳಿ 3 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ಬೃಹತ್ ಪ್ರವಾಸಿ ತಾಣ ನಿರ್ಮಿಸಲು ಆಸ್ಟ್ರೇಲಿಯಾದ ಸಂಸ್ಥೆ ಮುಂದೆ ಬಂದಿದೆ ಎಂದೂ ಸಚಿವರು ಹೇಳಿದರು. ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಶ್ರಮಿಸುವುದಾಗಿಯೂ ಅವರು ಭರವಸೆ ನೀಡಿದರು.
ಮುಖಪುಟ / ಇವತ್ತು... ಈ ಹೊತ್ತು...