ಬೆಂಗಳೂರಿನಲ್ಲಿ ಧಾರಾಕಾರ ಮಳೆ, ಮೂವರು ಮಳೆಗೆ ಹಾರ
ಬೆಂಗಳೂರು : ಸೋಮವಾರ ಮಧ್ಯಾಹ್ನ ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಕನಿಷ್ಠ ಮೂವರು ಬಲಿಯಾಗಿದ್ದು , ತಗ್ಗು ಪ್ರದೇಶದಲ್ಲಿರುವ ನೂರಾರು ಮನೆ, ಗುಡಿಸಲುಗಳು ಜಲಾವೃತಗೊಂಡಿವೆ. ತೆಂಗಿನ ಮರಗಳು ಬುಡ ಕೆಳಗಾಗಿದ್ದರೆ, ರಸ್ತೆಗೆ ಅಡ್ಡ ಬಿದ್ದಿರುವ ಮರಗಳಿಂದ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಕೆಂಗೇರಿ ಪೋಲಿಸ್ ಠಾಣೆ ವ್ಯಾಪ್ತಿಯ ಸಾರಾ ಗಾರ್ಮೆಂಟ್ಸ್ ಹಿಂಭಾಗದ ಚರಂಡಿ ನೀರಿನಲ್ಲಿ ಅಣ್ಣಯ್ಯಪ್ಪ (50) ಎನ್ನುವ ವ್ಯಕ್ತಿ ಕೊಚ್ಚಿ ಹೋಗಿದ್ದಾನೆ. ಜ್ಞಾನಭಾರತಿ ಸಮೀಪ ಹರಿಯುವ ವೃಷಭಾವತಿ ನೀರಿನಲ್ಲಿ ಅಪರಿಚಿತ ವ್ಯಕ್ತಿಯಾಬ್ಬ ತೇಲಿ ಬಂದಿದ್ದು , ಪೊಲೀಸರು ಶವವನ್ನು ಕಷ್ಟಪಟ್ಟು ರಕ್ಷಿಸಿದ್ದಾರೆ. ಶಿವಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬ್ರಾಡ್ವೇ ರಸ್ತೆಯ ಮಳೆನೀರಿನ ಚರಂಡಿಯಲ್ಲಿ ಮತ್ತೊಬ್ಬ ಅಪರಿಚಿತ ವ್ಯಕ್ತಿಯ ಶವ ಪೊಲೀಸರಿಗೆ ದೊರೆತಿದೆ.
ಕೃಷ್ಣರಾಜೇಂದ್ರ ಮಾರುಕಟ್ಟೆಯ ವ್ಯಾಪಾರ ಸಮುಚ್ಚಯ ಕಟ್ಟಡದ ಕೆಳ ಅಂತಸ್ತು ಹಾಗೂ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಭಾರೀ ಪ್ರಮಾಣದ ನೀರು ನಿಂತಿದ್ದು , ಅಲ್ಲಿನ ಪರಿಸರ ಸೋಮವಾರ ರಾತ್ರಿ ಕೆರೆಯನ್ನು ಹೋಲುತ್ತಿತ್ತು . ಅಂಗಡಿ ಮುಂಗಟ್ಟಿಗೆ ನೀರು ನುಗ್ಗಿದ್ದು , ತರಕಾರಿ ಹಾಗೂ ದಿನಸಿ ವಸ್ತುಗಳು ನೀರಿನಲ್ಲಿ ತೇಲುತ್ತಿದ್ದವು. ಶಿವಾಜಿನಗರ, ಕೋರಮಂಗಲ, ಟ್ಯಾನರಿ ರಸ್ತೆ , ಫ್ರೇಜರ್ ಟೌನ್, ಅಲಸೂರು, ಟ್ಯಾನರಿ ರಸ್ತೆ , ರಾಜಾಜಿನಗರ, ವಿಜಯನಗರ ಮುಂತಾದ ಬಡಾವಣೆಗಳಲ್ಲಿ ಜನರು ಮಳೆಯಿಂದಾಗಿ ತೀವ್ರ ತೊಂದರೆಗೊಳಗಾದರು.
ನಗರದಲ್ಲಿ 100 ಮಿಮೀ ಹಾಗೂ ವಿಮಾನ ನಿಲ್ದಾಣದಲ್ಲಿ ಸುಮಾರು 85 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ. ಲಕ್ಷ ದ್ವೀಪದಲ್ಲಿ ಉಂಟಾಗಿರುವ ತೀವ್ರ ಸುಳಿಗಾಳಿಯಿಂದಾಗಿ ಮುಂದಿನ 48 ಗಂಟೆಗಳಲ್ಲಿ ಗುಡುಗಿನಿಂದ ಕೂಡಿದ ಭಾರೀ ಮಳೆ ನಗರದಲ್ಲಿ ಮುಂದುವರಿಯುವ ಸಾಧ್ಯತೆಯಿದೆ.
(ಇನ್ಫೋ ವಾರ್ತೆ)