‘ಚೀನಾದ ಹಾಫ್ರೇಟ್ ಚೀಪ್ರೇಟ್ ವಸ್ತು ಮಾರಾಟ ಆಗ್ತಿಲ್ಲ’
ಬೆಂಗಳೂರು : ಆರು ಕಾಸಿನ ಸಾಮಾನು ಮೂರೇ ಕಾಸಿಗೆ ಸಿಗುತ್ತದೆ. ಮೇಡ್ ಇನ್ ಚೈನಾ ಪ್ರಾಡೆಕ್ಟ್ಸ್ ಬಂದಿದೆಯಂತೆ. ಬಾಂಬೆಯಲ್ಲಿ ಈಗಾಗಲೇ ಮಾರಾಟ ಆಗ್ತಾ ಇದೆಯಂತೆ. ಬೆಂಗಳೂರಿಗೂ ನಾಳೇನೋ ನಾಡಿದ್ದೋ ಬಂದೇ ಬಿಡತ್ತೆ. ನಿಮಗೆ ಗೊತ್ತಾ? ಕಲರ್ ಟೀವಿ ಬರೀ 3ಸಾವಿರ ಅಂತೆ, 500 ರುಪಾಯಿಗೆ ಸೈಕಲ್ಲು, 15 ಸಾವಿರಕ್ಕೆ 4 ಸ್ಟ್ರೋಕ್ ಮೋಟರ್ಬೈಕ್ ...
ಬೆಂಗಳೂರೂ ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲೆಲ್ಲಾ ಬರೀ ಇದೇ ಮಾತು. ಅಲ್ರೀ ಚೈನಾದೋರು ಇಷ್ಟು ಚೀಪಾಗಿ ಟಿ.ವಿ, ಫ್ರಿಜ್, ಸೈಕಲ್, ಸ್ಕೂಟರ್, ಕಾರು ಹ್ಯಾಗ್ರೀ ಕೊಡ್ತಾರೆ. ಅಲ್ಲ ಹಾಫ್ರೇಟ್ ಚೀಪ್ರೇಟ್ಗೆ ಅವರು ಇಷ್ಟೇಲ್ಲಾ ಕೊಟ್ರೆ ನಮ್ಮ ದೇಶದ ಎಕಾನಮಿ ಏನಾಗತ್ತೆ ಎಂದು ಮತ್ತೆ ಕಲವರು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವು ಮೊಸದ ಸಂಸ್ಥೆಗಳು ಪರಿಸ್ಥಿತಿಯ ಲಾಭ ಪಡೆದು ಚೈನಿ ವಸ್ತುಗಳ ಮಾರಲು ಏಜೆನ್ಸಿ ನೀಡಲು ಠೇವಣಿ ಕಟ್ಟಿಸಿಕೊಂಡು ಕೆಲವರನ್ನು ಮೋಸ ಮಾಡಿವೆ ಎಂಬ ಸುದ್ದಿಗಳೂ ಹರಿದಾಡುತ್ತಿವೆ.
ಚೈನಿ ವಸ್ತುಗಳ ರೇಟ್ಲಿಸ್ಟ್ನ ಜೇರಾಕ್ಸ್ ಪ್ರತಿಗಳಂತೂ ಬೆಂಗಳೂರಿನ ಬಹುತೇಕ ಎಲ್ಲ ಫ್ಯಾಕ್ಟರಿ, ಆಫೀಸ್ಗಳಲ್ಲೂ ಸಂಚರಿಸಿಬಿಟ್ಟಿವೆ. ಭಾರತ ಸರಕಾರ ವಿದೇಶೀ ವಸ್ತುಗಳ ಮುಕ್ತು ಆಮದಿಗೆ ಅವಕಾಶ ನೀಡಿದ್ದು ಇದರಿಂದಾಗಿಯೇ ಚೈನಿ ವಸ್ತುಗಳು ಭಾರತಕ್ಕೆ ಬಂದಿವೆ ಎಂಬ ಸುದ್ದಿ ಸುಳಿದಾಡುತ್ತಿದೆ.
ಈ ಮಧ್ಯೆ ಭಾರತ ವಿಶ್ವ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದಾಗ್ಯೂ ಇನ್ನೂ ಯಾವುದೇ ದೇಶದಿಂದ ಭಾರತಕ್ಕೆ ಭಾರಿ ಪ್ರಮಾಣದಲ್ಲಿ ವಸ್ತುಗಳು ಬಂದಿಲ್ಲ ನಮ್ಮ ದೇಶೀಯ ಮಾರುಕಟ್ಟೆಗೆ ಯಾವುದೇ ಹಾನಿ ಇಲ್ಲ ಎಂಬ ಧೈರ್ಯದ ಮಾತುಗಳನ್ನು ಕೇಂದ್ರ ಜವಳಿ ಖಾತೆ ರಾಜ್ಯ ಸಚಿವ ವಿ. ಧನಂಜಯ ಕುಮಾರ್ ಆಡಿದ್ದಾರೆ.
ಬೆಂಗಳೂರಲ್ಲಿ ಅಗರಬತ್ತಿ ತಯಾರಕರ ಸಂಘ ಏರ್ಪಡಿಸಿದ್ದ ಅಗರಬತ್ತಿ ಬಿಯಾಂಡ್ 2000 ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು ಈ ವಿಷಯ ತಿಳಿಸಿದ್ದಾರೆ. ಚೀನಾ ದೇಶದ ವಸ್ತುಗಳು ಅಗ್ಗದ ಬೆಲೆಗೆ ಭಾರತೀಯ ಮಾರುಕಟ್ಟೆಯಲ್ಲಿ ಯದ್ವಾತದ್ವ ಮಾರಾಟವಾಗುತ್ತಿದೆ ಎಂಬುದು ಬೋಗಸ್ ಸುದ್ದಿ ಎಂದೂ ಅವರು ಹೇಳಿದರು.
ರಾಜ್ಯಾದ್ಯಂತ ಹಬ್ಬಿರುವ ಈ ಸುದ್ದಿಯಿಂದ ಚಕಿತರಾದ ತಾವು ಕೇಂದ್ರ ಕಂದಾಯ ಇಲಾಖೆಯಲ್ಲಿ ವಿಚಾರಿಸಿದೆ. ಆದರೆ, ಭಾರಿ ಪ್ರಮಾಣದಲ್ಲಿ ಚೀನಾದಿಂದ ಯಾವುದೇ ವಸ್ತು ದೇಶಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು ಎಂದೂ ಧನಂಜಯ ಕುಮಾರ್ ಹೇಳಿದರು.
ಒಂದೊಮ್ಮೆ ದೇಶದ ಮಾರುಕಟ್ಟೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುವಂತಹ ಪರಿಸ್ಥಿತಿ ನಿರ್ಮಾಣವಾದರೆ, ಅದನ್ನು ನಿಯಂತ್ರಿಸುವ ಅಧಿಕಾರ ಕೇಂದ್ರಕ್ಕೆ ಇದ್ದೇ ಇದೆ ಎಂದರು. ಅಗರಬತ್ತಿ ಉತ್ಪಾದಕರಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರಕಾರ ಅಬಕಾರಿ ಸುಂಕ ಪಾವತಿ ವಿನಾಯ್ತಿ ನೀಡಿದೆ ಎಂದೂ ಹೇಳಿದರು. ನಮ್ಮ ನಾಡಿನಿಂದ 140ಕ್ಕೂ ಹೆಚ್ಚು ರಾಷ್ಟ್ರಗಳಿಗೆ 50ಕ್ಕೂ ಹೆಚ್ಚು ಮಾದರಿಯ ಅಗರಬತ್ತಿ ರಫ್ತಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.