ಶುಭ ಶುಕ್ರವಾರಕ್ಕೆ ತುಂತುರು ತೋರಣ
ರಾಜ್ಯದಲ್ಲಿ ಮಳೆ ಮತ್ತೆ ಚುರುಕಾಗಿದೆ. ಉಪ್ಪಿನಂಗಡಿಯಲ್ಲಿ 11 ಸೆಂಮೀ, ಕಾರ್ಕಳದಲ್ಲಿ 7, ಗದಗ, ಆಳಂದ, ಸಿದ್ಧಾಪುರಗಳಲ್ಲಿ ತಲಾ 6, ಬೆಳ್ತಂಗಡಿ, ಮೂಲ್ಕಿ, ಧರ್ಮಸ್ಥಳ, ಮಾಗಡಿ ಬಸರಾಳುಗಳಲ್ಲಿ ತಲಾ 5, ಬಂಟ್ವಾಳ, ಮಾಣಿ, ಮಂಗಳೂರು, ಕೋಟಾ, ಬೀದರ್, ಬಂಡೀಪುರ, ಕೋಣನೂರು, ಚಿಂತಾಮಣಿ, ಮಂಡ್ಯ, ಯಳಂದೂರುಗಳಲ್ಲಿ ತಲಾ 3 ಸೆಂಮೀ ಮಳೆ ಬಿದ್ದಿದೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ತುಂತುರು ಮಳೆ ಬೀಳುತ್ತಿದ್ದು , ದಿನದ ತಾಪಮಾನದಲ್ಲಿ ಕುಸಿತ ಉಂಟಾಗಿದೆ. ದಿನದ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಷಿಯಸ್ ರಾಯಚೂರಿನಲ್ಲಿ ದಾಖಲಾಗಿತ್ತು . ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಶನಿವಾರದವರೆಗೆ ಮಳೆ- ಮೋಡದ ಕಣ್ಣಾ ಮುಚ್ಚಾಲೆ ಮುಂದುವರಿಯಲಿದೆ.
ಬೆಂಗಳೂರಿಗೂ ಬಂತು : ಬಂತಿದೋ .. ಅನ್ನುವ ಭ್ರಮೆ ಮೂಡಿಸಿ ಮರೀಚಿಕೆಯಾಗಿದ್ದ ಮಳೆ, ಅಂತೂ ಇಂತೂ ಬೆಂಗಳೂರಿಗೆ ಒಲಿದಿದೆ. ಬುಧವಾರ ಹಾಗೂ ಗುರುವಾರ ಮಳೆ ಬಂತು ಮಳೆ ಅನ್ನುವ ಸುದ್ದಿ ನಗರದ ಬಹುತೇಕ ಬಡಾವಣೆಗಳಲ್ಲಿ . ಪರಿಣಾಮ, ತಾಪಮಾನದಲ್ಲಿ 1 ಡಿಗ್ರಿ ಸೆಲ್ಷಿಯಸ್ ಕುಸಿತ. ನಗರದ ಜನರಿಗೆ ತಂಪುಹವೆಯ ಹಿತ.
34.6 ರಷ್ಟಿದ್ದ ದಿನದ ಗರಿಷ್ಠ ತಾಪಮಾನ 33.5 ಡಿಗ್ರಿ ಸೆಲ್ಷಿಯಸ್ಗೆ ಕುಸಿದಿದೆ.
ಶುಕ್ರವಾರ ತಾಪಮಾನದಲ್ಲಿ ಇನ್ನಷ್ಟು ಕುಸಿತ ಕಾಣುವ ನಿರೀಕ್ಷೆಯಿದ್ದು , ದಿನದ ಗರಿಷ್ಠ ಉಷ್ಣಾಂಶ 30 ಡಿಗ್ರಿ ಆಸುಪಾಸಿನಲ್ಲಿರುತ್ತದೆ. ಯಲಹಂಕ ಪ್ರದೇಶದಲ್ಲಿ 9 ಮಿಮೀ ಮಳೆ ಸುರಿದಿದ್ದರೆ, ವಿಮಾನ ನಿಲ್ದಾಣದಲ್ಲಿ 3.9 ಮಿಮೀ, ಉಳಿದಂತೆ ಸಾಮಾನ್ಯವಾಗಿ 0.2 ಮಿಮೀ ಮಳೆ ಸುರಿದಿದೆ. ಕೆಲವೆಡೆ ರಸ್ತೆಗಳು ಕೊಚ್ಚೆಗುಂಡಿಗಳಂತೆ ಬೇಸಗೆಯಲ್ಲೇ ಪರಿವರ್ತನೆಯಾಗಿವೆ. ಇದು ಈ ಹೊತ್ತಿನ ಬೆಂಗಳೂರು.