ಉಡುಪಿ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಲಾಠಿಚಾರ್ಜ್
ಉಡುಪಿ : ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡುತ್ತಿರುವುದನ್ನು ವಿರೋಧಿಸಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾದ ಸದಸ್ಯರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ, ಪೊಲೀಸರು ಲಾಠಿಚಾರ್ಜ್ ನಡೆಸಿ ಪರಿಸ್ಥಿತಿಯನ್ನು ತಹಬಂದಿಗೆ ತಂದಿದ್ದಾರೆ.
ಬಿಜೆಪಿ ಉಪಾಧ್ಯಕ್ಷ ಡಾ. ವಿ.ಎಸ್. ಆಚಾರ್ಯ ಅವರ ನೇತೃತ್ವದಲ್ಲಿ ಸಂಘಟಿತರಾದ ಯುವಮೋರ್ಚಾದ ಕಾರ್ಯಕರ್ತರು ಮೆರವಣಿಗೆ ನಡೆಸಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಎದುರು ಪ್ರತಿಭಟನೆ ನಡೆಸಿದರು. ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರು ಪ್ರತಿಭಟನೆಕಾರರ ಮಾತಿಗೆ ಓಗೊಟ್ಟರೂ, ಉದ್ರಿಕ್ತರಾದ ಕೆಲವು ಮಂದಿ ಹಿಂಸಾಚಾರಕ್ಕೆ ಮುಂದಾದಾಗ ಬೆತ್ತ ಪ್ರಹಾರ ಅನಿವಾರ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಹೂವಿನ ಕುಂಡಗಳನ್ನು ಒಡೆದು ಹಾಕಿರುವ ಉದ್ರಿಕ್ತರು, ಕೆಪಿಟಿಸಿಎಲ್ ಕಚೇರಿಗೆ ಬೀಗ ಜಡಿಯಲು ಪ್ರಯತ್ನಿಸಿದ್ದಾರೆ. ಇದೇ ಸಂದರ್ಭದಲ್ಲಿ ಆಚಾರ್ಯ ಅವರ ನಿಯಂತ್ರಣದಿಂದ ದೂರಾದ ಪ್ರತಿಭಟನಕಾರರು ರಸ್ತೆ ತಡೆಯನ್ನೂ ನಡೆಸಿದ್ದಾರೆ. ಪ್ರತಿಭಟನಾಕಾರರ ಒತ್ತಾಯದ ಮೇರೆಗೆ, ಲೋಡ್ಷೆಡ್ಡಿಂಗ್ ಮಾಡುವ ಮುನ್ನ ಜನರ ಗಮನಕ್ಕೆ ತರುವುದಾಗಿ ಅಧಿಕಾರಿಗಳು ಲಿಖಿತ ಭರವಸೆ ನೀಡಿದ್ದಾರೆ.
(ಯುಎನ್ಐ)