ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಯಾಣಧನ -ವಿಶ್ವನಾಥ್ ಚಿಂತನೆ
ಬೆಂಗಳೂರು : ಶಾಲೆಗಾಗಿ ಮೂರು ಕಿಮೀಗಿಂತ ಹೆಚ್ಚಿನ ದೂರವನ್ನು ಕ್ರಮಿಸುವ ಪ್ರೌಢಶಾಲಾ ವಿದ್ಯಾರ್ಥಿಗಳ ಬಸ್ ಪ್ರಯಾಣ ದರವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಶಿಕ್ಷಣ ಸಚಿವ ಎಚ್. ವಿಶ್ವನಾಥ್ ಪ್ರಕಟಿಸಿದ್ದಾರೆ.
ಪ್ರಾಥಮಿಕ ಶಿಕ್ಷಣ ಕುರಿತ ಡಾ. ರಾಜಾ ರಾಮಣ್ಣ ನೇತೃತ್ವದ ಕಾರ್ಯಪಡೆಯ ಶಿಫಾರಸ್ಸಿನ ಅನ್ವಯ ಸರ್ಕಾರ ಈ ಕ್ರಮ ಕೈಗೊಳ್ಳಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವಿಶ್ವನಾಥ್ ಹೇಳಿದರು. ರಾಜ್ಯದಲ್ಲಿನ ಪ್ರೌಢಶಾಲೆಗಳ ಪೈಕಿ 70 ಕ್ಕೂ ಹೆಚ್ಚು ಶಾಲೆಗಳಲ್ಲಿ 50 ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಈ ಶಾಲೆಗಳನ್ನು ಸಮೀಪದ ಶಾಲೆಗಳೊಂದಿಗೆ ವಿಲೀನಗೊಳಿಸಲಾಗುವುದು ಎಂದರು.
30 ಕ್ಕೂ ಹೆಚ್ಚು ಜೂನಿಯರ್ ಕಾಲೇಜುಗಳನ್ನು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಬೇರೆಡೆ ವಿಲೀನಗೊಳಿಸಬೇಕಾಗಿದೆ ಹಾಗೂ ಅಗತ್ಯ ವಿದ್ಯಾರ್ಥಿಗಳ ಸಂಖ್ಯೆಯಿಲ್ಲದ 230 ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಬೇಕಾಗಿದೆ ಎಂದು ವಿಶ್ವನಾಥ್ ಹೇಳಿದರು. ಅಗತ್ಯ ವಿದ್ಯಾರ್ಥಿಗಳು ಇಲ್ಲದ 2000 ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ಶಿಕ್ಷಣ ಸಚಿವರ ತೀರ್ಮಾನ ಸಮಾಜದ ವಿವಿಧ ಗಣ್ಯರ ಕಟು ಟೀಕೆಗೆ ಗುರಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...