ಉಡುಪಿ : ವಾಜಪೇಯಿ ವಿರುದ್ಧ ಕಾಂಗ್ರೆಸ್ ಪಕ್ಷದಬೃಹತ್ ರ್ಯಾಲಿ
ಉಡುಪಿ : ಜನ ವಿರೋಧಿ ಹಾಗೂ ರೈತ ವಿರೋಧಿ ಎನ್ಡಿಎ ಸರ್ಕಾರವನ್ನು ವಿರೋಧಿಸಿ ನಡೆದ ಕಾಂಗ್ರೆಸ್ ಪಕ್ಷದ ರ್ಯಾಲಿ ಹಾಗೂ ಸಾರ್ವಜನಿಕ ಸಭೆ, ರಕ್ಷಣಾ ಒಪ್ಪಂದಗಳಲ್ಲಿನ ಅವ್ಯವಹಾರ ಪ್ರಕರಣದ ಹಿನ್ನೆಲೆಯಲ್ಲಿ ರಾಜೀನಾಮೆ ಕೊಡುವಂತೆ ಪ್ರಧಾನಿ ವಾಜಪೇಯಿ ಅವರನ್ನು ಒತ್ತಾಯಿಸಿತು.
ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ವಿನಯಕುಮಾರ ಸೊರಕೆ , ಆರು ವಾರಗಳ ಕಾಲ ಸಂಸತ್ತಿನ ಕಲಾಪವನ್ನು ಬಹಿಷ್ಕರಿಸಿದ ಕಾಂಗ್ರೆಸ್ನ ನಿಲುವನ್ನು ಸಮರ್ಥಿಸಿಕೊಂಡರು. ತೆಹಲ್ಕಾ ಬಯಲು ಮಾಡಿದ ಹಗರಣದಲ್ಲಿ ಪಾಲ್ಗೊಂಡವರ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ವಿಫಲವಾಗಿದೆ. ಅದು ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಸೊರಕೆ ಹೇಳಿದರು.
ಜಿಲ್ಲೆಯ ಶಾಸಕರು ಹಾಗೂ ಕೆಪಿಸಿಸಿಐ ವೀಕ್ಷಕ ದಾಸೇಗೌಡ ಸೇರಿದಂತೆ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರೂ, ತೆಹಲ್ಕಾ ಬಯಲು ಮಾಡಿದ ಹಗರಣದ ಹಿನ್ನೆಲೆಯಲ್ಲಿ ವಾಜಪೇಯಿ ಪದಚ್ಯುತಿಗೆ ಒತ್ತಾಯಿಸಿದರು. ಇದಕ್ಕೂ ಮುನ್ನ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ವಾಜಪೇಯಿ ಹಾಗೂ ಎನ್ಡಿಎ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಗುಂಪು, ಎನ್ಡಿಎ ಸರ್ಕಾರವನ್ನು ವಜಾ ಮಾಡುವಂತೆ ಹಾಗೂ ಎಲ್ಲಾ ಹಗರಣಗಳ ಕುರಿತು ತನಿಖೆ ನಡೆಸುವಂತೆ ರಾಷ್ಟ್ರಪತಿಯವರನ್ನು ಒತ್ತಾಯಿಸುವ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿತು.
(ಯುಎನ್ಐ)