ಕೃಷ್ಣ ಅವರೇ, ಕಾಫಿ ನಾಡಿನ ಉದ್ಧಾರವೂ ನಿಮ್ಮ ಗಮನದಲ್ಲಿರಲಿ
ಕೊಡಗು : ಕೊಡಗು ಜಿಲ್ಲೆಯ ಅಭಿವೃದ್ಧಿಯತ್ತ ಗಮನ ಹರಿಸಿ ರಾಜ್ಯಸರಕಾರ ವಿಶೇಷ ಯೋಜನೆಗಳನ್ನು ಪ್ರಕಟಿಸುವಂತೆ ಒತ್ತಾಯಿಸಿ ಕೂರ್ಗ್ ನ್ಯಾಷನಲ್ ಕೌನ್ಸಿಲ್ ಏಪ್ರಿಲ್ 11ರಂದು ಬೆಂಗಳೂರು ಚಲೋ ರ್ಯಾಲಿ ಹಮ್ಮಿಕೊಂಡಿದೆ.
ರಾಜ್ಯದ ಸಮೃದ್ಧ ಜಿಲ್ಲೆ ಎನಿಸಿಕೊಂಡಿರುವ ಕೊಡಗಿನಿಂದ ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ಆದಾಯ ಬರುತ್ತಿದ್ದರೂ, ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸರಕಾರ ಗಮನ ಕೊಡುತ್ತಿಲ್ಲ ಎಂಬುದು ಕೊಡಗಿನವರ ದಶಕಗಳ ಕೊರಗು. ಈ ಹಿನ್ನೆಲೆಯಲ್ಲಿಯೇ ಈ ಜಿಲ್ಲೆಯನ್ನು ಪ್ರತ್ಯೇಕ ರಾಜ್ಯವಾಗಿ ಘೋಷಿಸಬೇಕೆಂದು ಕೊಡವರು ಅನೇಕ ಬಾರಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮುಂದೆ ತಮ್ಮ ಬೇಡಿಕೆ, ಆಗ್ರಹಗಳನ್ನಿಟ್ಟಿದ್ದರು.
ಜಿಲ್ಲೆಯಲ್ಲಿ ಕೊನೇ ಪಕ್ಷ ಅಭಿವೃದ್ಧಿ ಕಾರ್ಯಕ್ರಮಗಳನ್ನಾದರೂ ಹಮ್ಮಿಕೊಳ್ಳಬೇಕೆಂದು ಒತ್ತಾಯಿಸಿ, ಈಗ ಮತ್ತೊಮ್ಮೆ ಬೆಂಗಳೂರು ಚಲೋ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರದ ಪತ್ರಿಕಾಗೋಷ್ಠಿಯಲ್ಲಿ ಕೂರ್ಗ್ ನ್ಯಾಷನಲ್ ಕೌನ್ಸಿಲ್ನ ಕಾರ್ಯದರ್ಶಿ ಎನ್. ಯು. ನಾಚಪ್ಪ ಹೇಳಿದ್ದಾರೆ.
ರ್ಯಾಲಿಯ ನಂತರ ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ನಾಚಪ್ಪ ತಿಳಿಸಿದರು. ಕೊಡವರ ಮುಖ್ಯ ಬೇಡಿಕೆಗಳು :
- ಕೊಡವರ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರ ತಕ್ಷಣವೇ ವಿಶೇಷ ಯೋಜನೆಗಳನ್ನು ರೂಪಿಸಬೇಕು.
- ರಾಜ್ಯ ಸಭೆ ಮತ್ತು ಲೋಕಸಭೆಗಳಿಗೆ ಕೊಡವರನ್ನು ನಾಮಕಾರಣ ಮಾಡಬೇಕು.
- ವಿಶ್ವ ವಾಣಿಜ್ಯ ಒಪ್ಪಂದದಿಂದ ಕಾಫಿ ಉದ್ಯಮದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಪ್ಪಿಸಲು ಕೇಂದ್ರ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು.