Get Updates
Get notified of breaking news, exclusive insights, and must-see stories!

ಕೆಂಪೇಗೌಡ, ಬಸವಣ್ಣ , ಅಂಬೇಡ್ಕರ್‌ -ಯಾರು ಹಿತವರು ?

ಬೆಂಗಳೂರು : ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲೆಸುವುದು ಅನ್ನುವ ಮಾತಿಗೆ ಹಲವಾರು ವರ್ಷಗಳಿಂದ ಮಾತುಗಳಲ್ಲೇ ಉಳಿದಿರುವ ದೇವನಹಳ್ಳಿ ವಿಮಾನ ನಿಲ್ದಾಣವನ್ನು ಉದಾಹರಿಸಬಹುದು. ದೇವನಹಳ್ಳಿಯ ಜನ ತಮ್ಮೂರಿಗೆ ಪಕ್ಷಿಗಳಂತೆ ವಿಮಾನಗಳೂ ಬಂದು ಹೋಗುವುದನ್ನು ಯಾವಾಗ ನೋಡುತ್ತಾರೋ ಗೊತ್ತಿಲ್ಲವಾದರೂ, ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಲು ಧಾರ್ಮಿಕ ಗುರುಗಳು ತರಾತುರಿ ಸ್ಪರ್ಧೆಯಲ್ಲಿದ್ದಾರೆ.

ಆದಿಚುಂಚನಗಿರಿ ಬಾಲಗಂಗಾಧರನಾಥ ಶ್ರೀಗಳು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡುವಂತೆ ಅಪ್ಪಣೆ ಕೊಡಿಸಿದ್ದಾರೆ. ದುರ್ಬಲರ ರಕ್ಷಣೆಗಾಗಿ ಹೋರಾಡಿದ ಕೆಂಪೇಗೌಡರು, ಕೆರೆ, ಕಟ್ಟೆ, ಕಾಲುವೆ ನಿರ್ಮಿಸಿದವರು. ಉದ್ಯಾನಗಳ ನಗರ ಬೆಂಗಳೂರನ್ನು ಕಟ್ಟಿದವರು. ವಿಮಾನ ನಿಲ್ದಾಣವನ್ನು ಅಂಥಾ ಮಹನೀಯರ ಹೆಸರಿನಿಂದ ಗುರ್ತಿಸುವುದರಿಂದ ಕೆಂಪೇಗೌಡರ ಹೆಸರು ಶಾಶ್ವತವಾಗಿ ಉಳಿಯುತ್ತದೆ ಎಂದು ಚುಂಚನಗಿರಿ ಸ್ವಾಮೀಜಿ ಹೇಳಿದ್ದಾರೆ.

ಸಿಂಧ್ಯಾಗೆ ಸ್ವಾಮೀಜಿ ಅಭಯಹಸ್ತ : ಸಂಯುಕ್ತದಳದ ಮುಖಂಡ ಪಿಜಿಆರ್‌ ಸಿಂಧ್ಯಾ ನೇತೃತ್ವದಲ್ಲಿ ಈ ಕೆಲಸ ಆಗಬೇಕೆಂಬುದು ಸ್ವಾಮೀಜಿ ಅವರ ಆಶಯ. ಈ ಮುಂಚೆ ಬೆಂಗಳೂರು ಮಹಾನಗರ ಬಸ್‌ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡುವ ಮೂಲಕ ಸಿಂಧ್ಯಾ ದಕ್ಷತೆ ಮೆರೆದಿದ್ದಾರೆ. ಆ ಕಾರಣ, ವಿಮಾನ ನಿಲ್ದಾಣ ನಾಮಕರಣ ಮಹೋತ್ಸವವೂ ಸಿಂಧ್ಯಾ ನೇತೃತ್ವದಲ್ಲೇ ಜರುಗಲಿ. ಈ ಬಗ್ಗೆ ಸರ್ಕಾರ ಸ್ಪಂದಿಸಲಿ ಎಂದು ಸ್ವಾಮೀಜಿ, ಸಿಂಧ್ಯಾ ಕಾರ್ಯ ಕ್ಷಮತೆಯ ಹೊಗಳಿದ್ದಾರೆ.

ಬೆಂಗಳೂರಿನ ಪುರಭವನದಲ್ಲಿ ಭಾನುವಾರ ಜರುಗಿದ ಕೆಂಪೇಗೌಡರ 489 ನೇ ಹುಟ್ಟುಹಬ್ಬ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸ್ವಾಮೀಜಿಯವರ ಆಶಯಕ್ಕೆ ಸ್ಪಂದಿಸಿದ ಸಿಂಧ್ಯಾ, ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರುವುದಾಗಿ, ಅಗತ್ಯ ಬಿದ್ದಲ್ಲಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಒಯ್ಯುವುದಾಗಿ ಹೇಳಿದರು.

ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವ ವಿಷಯದಲ್ಲಿ ಹೆಸರು ಸೂಚಿಸುತ್ತಿರುವುದು ಕೆಂಪೇಗೌಡರದೇ ಮೊದಲೇನಲ್ಲ . ಇದಕ್ಕೂ ಮುನ್ನ , ಕೆಲವು ಶರಣರು ಬಸವಣ್ಣ ಅವರ ಹೆಸರನ್ನು , ಕೆಲವು ದಲಿತ ಮುಖಂಡರು ಅಂಬೇಡ್ಕರ್‌ ಹೆಸರನ್ನು ವಿಮಾನ ನಿಲ್ದಾಣಕ್ಕೆ ಸೂಚಿಸಿದ್ದರು. ಅಲ್ಲಿಗೆ, ಕೆಂಪೇಗೌಡ, ಬಸವಣ್ಣ , ಅಂಬೇಡ್ಕರ್‌ ಅವರು ಸ್ಪರ್ಧೆಯಲ್ಲಿದ್ದಾರೆ ಎಂದಾಯಿತು. ವಿಮಾನ ನಿಲ್ದಾಣ ಕಾಮಗಾರಿ ಪೂರ್ಣವಾಗುವ ಹೊತ್ತಿಗೆ ಮತ್ತಷ್ಟು ಹಿರೇಮಣಿಗಳು ಈ ಜಂಗಾಜಂಗಿ ತುರುಸಿನಲ್ಲಿ ಸೇರ್ಪಡೆಯಾದರೆ ಅಚ್ಚರಿಯಿಲ್ಲ .

ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಲು ಮುಂದಾಗಿರುವ ನಾರಾಯಣಕುಮಾರ್‌

ಸ್ವಾಮೀಜಿ ವಿಮಾನ ನಿಲ್ದಾಣದ ಬಗ್ಗೆ ಮಾತನಾಡಿದರೆ, ಕನ್ನಡ ಚಳವಳಿಗಳಲ್ಲಿ ಎತ್ತಿದ ಕೈ ಎನಿಸಿರುವ ಮಾಜಿ ಶಾಸಕ ಜಿ. ನಾರಾಯಣಕುಮಾರ್‌ ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ ಕೆಂಪೇಗೌಡರ ಹೆಸರಿಡುವಂತೆ ಸರ್ಕಾರವನ್ನು ಆಗ್ರಹಿಸಿದರು. ಅಲ್ಲಿಗೆ ಕೆಂಪೇಗೌಡರ ಸ್ಮರಣೆ ಸಂಪೂರ್ಣವಾಯಿತು.

ಕೆಂಪೇಗೌಡ ಜಯಂತಿ ಸಂದರ್ಭದಲ್ಲಿ ಪ್ರತಿವರ್ಷ ಕೆಂಪೇಗೌಡರ ಹೆಸರಿನಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಎದ್ದು ಕಾಣುವ ಕೆಲವರಿಗೆ ಪ್ರಶಸ್ತಿ ನೀಡುವುದು ವಾಡಿಕೆ. ಈ ಸಲ ಪ್ರಶಸ್ತಿ ಪಡೆದವರ ಪಟ್ಟಿ - ನಾರಾಯಣರೆಡ್ಡಿ (ಕೃಷಿ), ಆರ್‌.ಗುಂಡಪ್ಪ (ಪತ್ರಿಕೋದ್ಯಮ), ಯಂಟಗಾನಹಳ್ಳಿ ಗಂಗಣ್ಣ (ಆಯುರ್ವೇದ), ಡಿ.ಗಣೇಶ್‌ (ಕ್ರಿಕೆಟ್‌), ಎಲ್‌.ಓಹಿಲೇಶ್‌ (ಬಾಲನಟ).

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+