ಬೀಡಿ ಸೇದುವಾಗ ಗಾಡಿ ಓಡಿಸಬಾರದುಎಂದು ಕರ್ನಾಟಕ ಸರ್ಕಾರ
ಬೆಂಗಳೂರು : ಓದುವಾಗ ಓದಬೇಕು, ಆಡುವಾಗ ಆಡಬೇಕು, ಎರಡು ಕೆಲಸವನ್ನೂ ಒಟ್ಟಿಗೆ ಮಾಡಬಾರದು ಎಂದು ಹಿರಿಯರು ಹೇಳುತ್ತಿದ್ದುದು ನಿಮಗೂ ನೆನಪಿರಬಹುದು. ಈಗ ಅದೇ ರೀತಿಯ ಮಾತನ್ನೇ ರಾಜ್ಯದ ಸಾರಿಗೆ ಸಚಿವರೂ ಶಾಸನಬದ್ಧವಾಗಿ ಹೇಳುತ್ತಿದ್ದಾರೆ. ವಾಹನ ಓಡಿಸುವಾಗ ಮೊಬೈಲ್ ಫೋನ್ ಬಳಸಬಾರದು ಎಂದು ಕಳೆದ ತಿಂಗಳು ಆದೇಶಿಸಿದ್ದ ಸಚಿವರು, ಈಗ ವಾಹನ ಚಲಿಸುವಾಗ ಬೀಡಿ, ಸಿಗರೇಟ್ ಸೇದುವುದನ್ನೂ ನಿಷೇಧಿಸುತ್ತಿದ್ದಾರೆ.
ವಾಹನ ಚಲಿಸುವಾಗ ಫೋನ್ನಲ್ಲಿ ಮಾತಾಡುವುದರಿಂದ ಚಾಲಕನ ಏಕಾಗ್ರತೆಗೆ ಭಂಗ ಉಂಟಾಗಿ ಅಪಘಾತವಾಗುತ್ತದೆ ಎನ್ನುವ ಕಾರಣವನ್ನೇ ಸಿಗರೇಟ್ ನಿಷೇಧಕ್ಕೂ ನೀಡಲಾಗಿದೆ. ವಾಹನ ಚಲಿಸುವಾಗ ಚಾಲಕರು ಒಂದು ಕೈಯಲ್ಲಿ ಸಿಗರೇಟ್ ಹಿಡಿದು ಕೇವಲ ಒಂದೇ ಕೈಯಲ್ಲಿ ವಾಹನ ಓಡಿಸುವುದರಿಂದ ಅಪಘಾತಗಳು ಸಂಭವಿಸುತ್ತವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.
ಈ ಅಧ್ಯಯನ ವರದಿಯ ಹಿನ್ನೆಲೆಯಲ್ಲಿ ವಾಹನ ಚಲಿಸುವಾಗ ಧೂಮಪಾನ ನಿಷೇಧವನ್ನು ಕಡ್ಡಾಯ ಮಾಡಲು ಸಚಿವರು ಆದೇಶ ಹೊರಡಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಆದೇಶ ಜಾರಿಗೆ ಬಂದ ತರುವಾಯ ಸಿಗರೇಟ್, ಬೀಡಿ ಸೇದುತ್ತಾ ವಾಹನ ಓಡಿಸುವವರು ಪೊಲೀಸರಿಗೆ ಸಿಕ್ಕಿ ಬಿದ್ದರೆ ದಂಡ ಕಟ್ಟಲು ಜೇಬು ತುಂಬ ಹಣ ಇಟ್ಟುಕೊಳ್ಳುವುದು ಅನಿವಾರ್ಯವಾಗುತ್ತದೆ.
ಈ ವಿಷಯವನ್ನು ಇಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಸಾರಿಗೆ ಸಚಿವ ಸಗೀರ್ ಅಹಮದ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಧೂಮಪ್ರಿಯರಿಗೆ ಟೈಮ್ ಚೆನ್ನಾಗಿಲ್ಲ . ಬಸ್ನಲ್ಲಿ , ಸಾರ್ವಜನಿಕ ಸ್ಥಳದಲ್ಲಿ ಬೀಡಿ, ಸಿಗರೇಟ್ ಸೇದುವಂತಿಲ್ಲ. ವಾಹನ ಓಡಿಸುವಾಗ ಓಪನ್ ಏರ್ನಲ್ಲಿ ಧೂಮಸೇವನೆಗೂ ಸಂಚಕಾರ. ಈ ಮಧ್ಯೆ ಬೆಲೆ ಏರಿಕೆಯ ಬಿಸಿ. ಒಟ್ಟಿನಲ್ಲಿ ಎಲ್ಲ ರೀತಿಯಲ್ಲೂ ಬಿಡಿ ಸಿಗರೇಟ್ ಸೇದುವವರನ್ನೇ ಸುಡುತ್ತಿದೆ.
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...