ಪುರಂದರರ ಕೃತಿಯ ಹಾಡಾಗಿಸುವವರಿಗೆ ಪ್ರಶಸ್ತಿ ಕೊಡಲು ಚಿಂತನೆ
ಬೆಂಗಳೂರು : ಇನ್ನು 35 ದಿನಗಳ ಕಾಲ ರಾಜ್ಕುಮಾರ್ ಭಾರತಿ, ಕೆ.ಜೆ.ಯೇಸುದಾಸ್, ಡಾ. ಎನ್.ರಮಣಿ, ಕುನ್ನಕುಡಿ ಆರ್.ವೈದ್ಯನಾಥನ್, ಯು.ಶ್ರೀನಿವಾಸ್ ಮೊದಲಾದ ಕರ್ನಾಟಕ ಸಂಗೀತಗಾರರು ಕಂಠದೂಟ ಉಣ ಬಡಿಸಲಿದ್ದಾರೆ. ನೀವೂ ಸಂಗೀತ ಪ್ರೇಮಿಗಳಾದರೆ ಚಾಮರಾಜಪೇಟೆಯ ಶ್ರೀರಾಮಸೇವಾ ಮಂಡಳಿಗೆ ಬರಬಹುದು.
ದಾಸರ ಕೃತಿಗೆ ರಾಗ ಕಟ್ಟುವವರಿಗೆ ಪ್ರಶಸ್ತಿ : ಮಂಡಳಿ ಆಯೋಜಿಸಿರುವ 36 ದಿನಗಳ ಸಂಗೀತೋತ್ಸವ ಸೋಮವಾರ ಪ್ರಾರಂಭವಾಯಿತು. ರಾಜ್ಯ ವಾರ್ತಾ ಸಚಿವ ಪ್ರೊ. ಬಿ.ಕೆ.ಚಂದ್ರಶೇಖರ್ ಈ ಸಂಗೀತೋತ್ಸವ ಉದ್ಘಾಟಿಸಿದರು. ತಮಿಳುನಾಡಿನಲ್ಲಿ ತ್ಯಾಗರಾಜರ ಹೆಸರಿನಲ್ಲಿ ಸರ್ಕಾರ ಪ್ರಶಸ್ತಿ ಕೊಡುತ್ತಿರುವಂತೆ ಕರ್ನಾಟಕ ಸರ್ಕಾರವೂ ಕೂಡ ಪುರಂದರ ದಾಸರ ಕೃತಿಗಳಿಗೆ ಜೀವ ತುಂಬುವ ಗಾಯಕ(ಕಿ) ಗೆ ಪುರಂದರ ಪ್ರಶಸ್ತಿ ನೀಡುವ ಕುರಿತು ಚಿಂತಿಸುತ್ತಿದೆ ಎಂಬ ಸಿಹಿ ಸುದ್ದಿ ಕೊಟ್ಟರು.
ಉದ್ಘಾಟನಾ ಸಮಾರಂಭದಲ್ಲೇ ಹೊರ ತರಲಾದ ಸ್ಮರಣ ಸಂಚಿಕೆಯನ್ನು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ ಬಿಡುಗಡೆ ಮಾಡಿದರು. 80 ಲಕ್ಷ ರುಪಾಯಿ ಖರ್ಚು ಮಾಡಿ, ದಾಸ ಸಾಹಿತ್ಯದ ಸಮಗ್ರ ಸಂಪುಟ ತರುವ ಸರ್ಕಾರದ ಹೆಜ್ಜೆಯನ್ನು ಸಚಿವೆ ಪುನರುಚ್ಚರಿಸಿದರು.
ಕಾರ್ಯಕ್ರಮದಲ್ಲಿ ಈ ಎಲ್ಲಕ್ಕಿಂತ ಹೆಚ್ಚಿನ ಗಮನ ಸೆಳೆದದ್ದು ಕದ್ರಿ ಗೋಪಾಲನಾಥ್ ಅವರ ಸಾಕ್ಸೊಫೋನ್. ಜೊತೆಗೆ ಅವರು ಹಾಡಿದ ಕನಕದಾಸರ ‘ನಮ್ಮಮ್ಮ ಶಾರದೆ’. ಏಪ್ರಿಲ್ ಹದಿನೈದನೇ ತಾರೀಖು ಮಾತ್ರ ಈ ಸಂಗೀತೋತ್ಸವಕ್ಕೆ ರಜೆ ಇರುತ್ತದೆ. ಬಿಡುವು ಮಾಡಿಕೊಂಡು ನೀವೂ ಕಾರ್ಯಕ್ರಮ ನೋಡಿಬಂದು, ನಿಮ್ಮ ಅನುಭವವನ್ನು ನಮಗೆ ಬರೆಯಿರಿ.
(ಇನ್ಫೋ ವಾರ್ತೆ)