ಮೇಲುಕೋಟೆಯಲ್ಲಿ ರಾಜ ವೈಭವದ ವೈರಮುಡಿ
ಮಂಡ್ಯ : ಚೆಲುವ ನಾರಾಯಣನ ಪುಣ್ಯಕ್ಷೇತ್ರ ಮೇಲುಕೋಟೆಯಲ್ಲಿ ಸೋಮವಾರ ರಾತ್ರಿ ವಿಜೃಂಭಣೆಯಿಂದ ವೈರಮುಡಿ ಉತ್ಸವ ಜರುಗಿತು. ಸಾವಿರಾರು ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು. ರಾಜ ವೈಭೋಗದ ವೈರಮುಡಿಯ ಅಲಂಕಾರ, ವೈಭವೋಪೇತ ಉತ್ಸವದಲ್ಲಿ ಪಾಲ್ಗೊಂಡ ಭಕ್ತರಲ್ಲಿ ತಮ್ಮ ಜನ್ಮ ಸಾರ್ಥಕವಾಯಿತು ಎಂಬ ಭಾವ ಎದ್ದು ಕಾಣುತ್ತಿತ್ತು.
ರಾಜ್ಯದ ಸಚಿವರಾದ ಎಚ್.ಸಿ. ಶ್ರೀಕಂಠಯ್ಯ, ಸಂಸತ್ ಸದಸ್ಯ ಅಂಬರೀಶ್, ಆದಿಚುಂಚನಗಿರಿ ಮಠಾಧೀಶರಾದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಶ್ರೀನಿವಾಸನ್ ಮತ್ತಿತ್ತರ ಗಣ್ಯರು ಇಲ್ಲಿಗೆ ಆಗಮಿಸಿ ಚೆಲುವನಾರಾಯಣಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸೋಮವಾರ ಬೆಳಗ್ಗೆ ಮಂಡ್ಯ ಜಿಲ್ಲೆಯ ಖಜಾನೆಯಲ್ಲಿ ಸುಭದ್ರವಾಗಿಟ್ಟಿದ್ದ ವೈರಮುಡಿ, ರಾಜಮುಡಿ ಹಾಗೂ ದೇವರ ರತ್ನಖಚಿತ, ವಜ್ರ ವೈಢೂರ್ಯಗಳಿಂದ ಕೂಡಿದ ಆಭರಣಗಳನ್ನು ಮೆರವಣಿಗೆಯಲ್ಲಿ ಸಕಲ ಭದ್ರತೆಗಳೊಂದಿಗೆ ದೇವಾಲಯಕ್ಕೆ ತರಲಾಯಿತು.
ಸೋಮವಾರ ಬೆಳಗ್ಗೆ 7-30ರಿಂದ 9 ಗಂಟೆವರೆಗೆ ರಾಹುಕಾಲ ಇದ್ದ ಕಾರಣ ಭಕ್ತಾದಿಗಳು ಬೆಳಗ್ಗೆ ಐದು ಗಂಟೆಯಿಂದಲೇ ಪುಷ್ಕರಣಿಯಲ್ಲಿ ಸ್ನಾನ ಮಾಡಿ, ದೇವರ ದರ್ಶನಕ್ಕೆ ಸರತಿಯ ಸಾಲಿನಲ್ಲಿ ನಿಂತಿದ್ದರು. ಭಾನುವಾರವೇ ಪಟ್ಟಣಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು ರಾತ್ರಿಯಿಡೀ ನಡೆದ ಉತ್ಸವದಲ್ಲಿ ಪಾಲ್ಗೊಂಡರು. ಮಂಗಳವಾರ ಕೂಡ ವಿಶೇಷ ಪೂಜೆಗಳು ನಡೆದವು.
(ಮಂಡ್ಯ ಜಿಲ್ಲಾ ಪ್ರತಿನಿಧಿಯಿಂದ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...