ರಾಜ್ಯದ ಹಲವೆಡೆ ತಂಪೆರೆದ ಮಳೆ
ಬೆಂಗಳೂರು : ಗುರುವಾರ ಬೆಂಗಳೂರಿನ ಒಂದೆರಡು ಬಡಾವಣೆಗಳಿಗೆ ತಂಪೆರೆದ ಮಳೆ ರಾಜ್ಯದ ಕೆಲವು ಭಾಗಗಳ ಬಿಸಿಲ ಬೇಗೆಯನ್ನೂ ಶಮನ ಮಾಡಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ದಕ್ಷಿಣ ಒಳನಾಡಿನ ಕೆಲವೆಡೆಗಳಲ್ಲಿ ಚದುರಿದಂತೆ ಮಳೆ ಆಗಿದೆ.
ಚಿಂತಾಮಣಿಯಲ್ಲಿ 4 ಸೆಂಟಿ ಮೀಟರ್, ಮೂರ್ನಾಡು ಹಾಗೂ ಬಾಗೇಪಲ್ಲಿಯಲ್ಲಿ ತಲಾ 2 ಸೆಂಟಿ ಮೀಟರ್ ಮಳೆ ಬಿದ್ದಿದೆ. ಉತ್ತರ ಒಳನಾಡಿನಲ್ಲಿ ಮಾತ್ರ ಒಣಹವೆ ಮುಂದುವರಿದಿದೆ. ಗರಿಷ್ಠ ಉಷ್ಣಾಂಶ ರಾಜ್ಯದಲ್ಲಿ ಅಲ್ಪ ಬದಲಾವಣೆ ಕಂಡಿದೆ. ಕೆಲವು ಕಡೆ ಗರಿಷ್ಠ ತಾಪಮಾನ ಏರಿದ್ದರೆ, ಉತ್ತರ ಒಳನಾಡು ಹಾಗೂ ಕರಾವಳಿಯ ಹಲವೆಡೆ ಸಾಮಾನ್ಯ ಮಟ್ಟದಲ್ಲಿತ್ತು.
ಕನಿಷ್ಠ ತಾಪಮಾನ ಕೂಡ ಕೆಲವು ಕಡೆ ಹೆಚ್ಚಿದ್ದು, ಉಳಿದಂತೆ ಸಾಮಾನ್ಯಮಟ್ಟದಲ್ಲಿ ಇತ್ತು. ರಾಜ್ಯದ ಅತಿ ಹೆಚ್ಚು ತಾಪಮಾನ 41.8 ಡಿಗ್ರಿ ಸೆಲ್ಸಿಯಸ್ ರಾಯಚೂರಿನಲ್ಲೂ, ಅತಿ ಕಡಿಮೆ ಉಷ್ಣಾಂಶ 16.9 ಡಿಗ್ರಿ ಸೆಲ್ಸಿಯಸ್ ಬೆಳಗಾವಿಯಲ್ಲೂ ದಾಖಲಾಗಿದೆ.
ಮುಂದಿನ 48 ಗಂಟೆಗಳ ಮುನ್ಸೂಚನೆಯ ರೀತ್ಯ ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಮಳೆ ಅಥವಾ ಗುಡುಗಿನಿಂದ ಕೂಡಿದ ಸುರಿಮಳೆ ಬೀಳುವ ಸಂಭವ ಇದೆ. ಉಳಿದಂತೆ ಒಣಹವೆ ಮುಂದುವರಿಯಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮುಖ್ಯವಾಗಿ ಮೋಡ ಕವಿದಿದ್ದು, ಸಂಜೆ ಅಥವಾ ರಾತ್ರಿ ಒಂದೆರಡು ವರಸೆ ಮಳೆ ಬೀಳುವ ಸಾಧ್ಯತೆ ಇದೆ. ದಿನದ ಗರಿಷ್ಠ ಉಷ್ಣಾಂಶ 32 ಡಿಗ್ರಿ ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಲುಪುವ ಸೂಚನೆ ಇದೆ.