ಸಾಹಿತಿಗಳ ಒತ್ತಡಕ್ಕೆ ಮಣಿದ ಕೃಷ್ಣ; ಪುಸ್ತಕಗಳಮೇಲಿನ ತೆರಿಗೆ ರದ್ದು
ಬೆಂಗಳೂರು : ಪುಸ್ತಕಗಳ ಮಾರಾಟದ ಮೇಲೆ ರಾಜ್ಯ ಸರಕಾರ ವಿಧಿಸಿರುವ ಶೇ. 4 ತೆರಿಗೆ ವಿರೋಧಿಸಿ ಪ್ರಕಾಶಕರು, ಲೇಖಕರು, ಪುಸ್ತಕ ಮಾರಾಟಗಾರರು ಕರೆ ನೀಡಿದ್ದ ಪುಸ್ತಕದಂಗಡಿ ಬಂದ್ ರಾಜ್ಯಾದ್ಯಂತ ಯಶಸ್ವಿಯಾಗಿದೆ. ಬೆಂಗಳೂರಿನಲ್ಲಿ ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆಯೂ ನಡೆಯಿತು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಲೇಖಕರು, ಪ್ರಕಾಶಕರು ಹಾಗೂ ಪುಸ್ತಕ ಮಾರಾಟಗಾರರು ಮೈಸೂರು ಬ್ಯಾಂಕ್ ವೃತ್ತದಿಂದ ವಿಧಾನಸೌಧದ ವರೆಗೆ ಮೆರವಣಿಗೆ ನಡೆಸಿ, ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. ಶುಕ್ರವಾರ ಪುಸ್ತಕೋದ್ಯಮದ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿತ್ತು.
ಈ ಮಧ್ಯೆ ಸಾಹಿತಿ, ಪ್ರಕಾಶಕರ ಒತ್ತಡಕ್ಕೆ ಮಣಿದ ರಾಜ್ಯ ಸರಕಾರ ಪುಸ್ತಕ ಮಾರಾಟ ತೆರಿಗೆ ರದ್ದು ಮಾಡುವ ತೀರ್ಮಾನ ಪ್ರಕಟಿಸಿತು. ಕೇವಲ ಪುಸ್ತಕಗಳ ಮಾರಾಟ ತೆರಿಗೆಯೇ ಅಲ್ಲದೆ, ಅಲ್ಯೂಮಿನಿಯಂ ಪಾತ್ರೆ, ಸೀಮೆಎಣ್ಣೆ ಸ್ಟೌ ಮೇಲೆ ವಿಧಿಸಲುದ್ದೇಶಿಸಿದ್ದ ತೆರಿಗೆಯನ್ನೂ ಕೈಬಿಟ್ಟಿರುವುದಾಗಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ವಿಧಾನಸಭೆಯಲ್ಲಿ ಶುಕ್ರವಾರ ಪ್ರಕಟಿಸಿದರು.
ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಕೇವಲ 100 ಅಂಗಡಿಗಳಲ್ಲಿ ಮಾತ್ರ ಬಿಯರ್ ಮಾರಾಟ ಮಾಡಲು ಅನುಮತಿ ನೀಡಲಾಗಿದೆ ಎಂದೂ ಅವರು ತಿಳಿಸಿದರು. ಬಜೆಟ್ ಮಂಡಿಸಿದ ಸಂದರ್ಭದಲ್ಲಿ ಮೊದಲ ಹಂತವಾಗಿ 300 ಅಂಗಡಿಗಳಲ್ಲಿ ಬಿಯರ್ ಹಾಗೂ ವೈನ್ ಮಾರಾಟ ಮಾಡಲು ಅನುಮತಿ ನೀಡಲಾಗುವುದು ಎಂದು ಕೃಷ್ಣ ತಿಳಿಸಿದ್ದರು. ಆದರೆ, ಕಿರಾಣಿ ಅಂಗಡಿಗಳಲ್ಲಿ ಬಿಯರ್ ಮಾರಾಟ ಮಾಡುವ ಪ್ರಸ್ತಾಪಕ್ಕೆ ಭಾರಿ ಪ್ರತಿರೋಧ ಬಂದ ಹಿನ್ನೆಲೆಯಲ್ಲಿ ಸರಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಿದೆ.
ರಾಜ್ಯದ ಹೆಸರಾಂತ ಸಾಹಿತಿಗಳು ಪುಸ್ತಕಗಳ ಮಾರಾಟದ ಮೇಲೆ ಹೇರಲುದ್ದೇಶಿದ್ದ ಶೇ. 4ರ ತೆರಿಗೆಗೆ ಸಂಬಂಧಿಸಿದಂತೆ ಪ್ರತಿಭಟಿಸಿದ್ದರಿಂದ ಪುಸ್ತಕಗಳ ಮೇಲಿನ ಮಾರಾಟ ತೆರಿಗೆಯನ್ನು ಸಂಪೂರ್ಣ ಹಿಂದಕ್ಕೆ ಪಡೆಯಲಾಗಿದೆ ಎಂದೂ ಅವರು ತಿಳಿಸಿದರು. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿಲ್ಲ. ಸರಿಯಾಗಿದೆ. ಆದರೆ, ಆರ್ಥಿಕ ಸ್ಥಿತಿಗತಿ ಕುರಿತಂತೆ ಬಜೆಟ್ನಲ್ಲಿ ಎಚ್ಚರಿಕೆಯ ಗಂಟೆ ಮೊಳಗಿಸಲಾಗಿದೆ ಎಂದೂ ಕೃಷ್ಣ ಹೇಳಿದರು.