ಮುರಿದ ಹೆಬ್ಬೆರಳು, ಉಳಿದ ಪಂದ್ಯಗಳಿಂದ ವೀರೇಂದ್ರ ಸೆಹ್ವಾಗ್ ಔಟ್
ಪುಣೆ : ಬೆಂಗಳೂರು ಒನ್ಡೇಯಲ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದ ಯುವ ಆಟಗಾರ ವೀರೇಂದ್ರ ಸೆಹ್ವಾಗ್, ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್ ಸರಣಿಯ ಉಳಿದ ಪಂದ್ಯಗಳಿಗೆ ಆಡುತ್ತಿಲ್ಲ. ಈ ಕಾರಣ ಫಾರ್ಮ್ ಕಳೆದುಕೊಂಡು, ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ಯುವರಾಜ್ ಸಿಂಗ್ಗೆ ಇನ್ನೊಂದು ಅವಕಾಶ ಸಿಗಲಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯವಂತ ಲೆಲೆ ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ವೀರೇಂದ್ರ ಸೆಹ್ವಾಗ್ ಅವರ ಹೆಬ್ಬೆಟ್ಟಿನ ಮೂಳೆ ಮುರಿದಿದ್ದು ಅದಕ್ಕೆ ಶಸ್ತ್ರಚಿಕಿತ್ಸೆ ಆಗಬೇಕಿದೆ. ಈ ಕಾರಣ ತಮ್ಮ ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾ ವಿರುದ್ಧ ಮಿಂಚಿದ್ದ ಪಂಜಾಬ್ನ ಯುವರಾಜ್ ಸಿಂಗ್ ಅವರನ್ನು ಕರೆಸಿಕೊಳ್ಳಲಾಗುವುದು ಎಂದು ಲೆಲೆ ಹೇಳಿದರು.
ಬೆಂಗಳೂರಿನ ಪಂದ್ಯದಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದಾಗ ಸೆಹ್ವಾಗ್ ಅವರ ಹೆಬ್ಬೆಟ್ಟು ಮುರಿದಿದೆ. ಆ ಪಂದ್ಯದಲ್ಲಿ 58 ರನ್ ಗಳಿಸಿದ್ದಲ್ಲದೆ 3 ವಿಕೆಟ್ ಪಡೆದ ಸೆಹ್ವಾಗ್ ಪಂದ್ಯ ಪುರುಷೋತ್ತಮರಾಗಿದ್ದರು. ಪ್ರಸ್ತುತ ಢಾಕಾದಲ್ಲಿರುವ ಯುವರಾಜ್ ಸಿಂಗ್, ಬುಧವಾರ ಪುಣೆಯಲ್ಲಿ ನಡೆಯುವ ಪಂದ್ಯಕ್ಕಂತೂ ಆಡುವುದಿಲ್ಲ. ಮಾರ್ಚ್ 31ರಂದು ಇಂದೋರ್ನಲ್ಲಿ ನಡೆಯಲಿರುವ ಸೀಮಿತ ಓವರ್ ಪಂದ್ಯದ 14 ಮಂದಿ ತಂಡದಲ್ಲಿ ಅವರು ಸ್ಥಾನ ಪಡೆಯಲಿದ್ದಾರೆ ಎಂದು ಲೆಲೆ ವಿವರಿಸಿದರು.
(ರಾಯ್ಟರ್ಸ್)