ನಿರಾಶೆಯ ಬಜೆಟ್ : ಪ್ರತಿಪಕ್ಷ ನಾಯಕರ ಪ್ರತಿಕ್ರಿಯೆ
ಬೆಂಗಳೂರು : ಸೋಮವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಮಂಡಿಸಿದ ಬಜೆಟ್ ನಿರಾಶಾದಾಯಕವಾಗಿದೆ ಎಂದು ಪ್ರತಿಪಕ್ಷ ನಾಯಕರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಕೆಲವೊಂದು ತೆರಿಗೆಗಳ ವಿಷಯದಲ್ಲಿ ಮುಖ್ಯಮಂತ್ರಿ ಸುದೀರ್ಘ ಕಸರತ್ತು ನಡೆಸಿದ್ದಾರೆ. ಈ ಬಗ್ಗೆ ಸಮಗ್ರ ಅಧ್ಯಯನದ ನಂತರ ಮಾತ್ರ ಪ್ರತಿಕ್ರಿಯೆ ನೀಡಲು ಸಾಧ್ಯ ಎಂದು ಪ್ರತಿಪಕ್ಷದ ನಾಯಕ ಕೆ.ಎಚ್. ಶ್ರೀನಿವಾಸ್ ಹೇಳಿದ್ದಾರೆ.
ಒಟ್ಟಾರೆಯಾಗಿ ಮುಂದಿನ ಸಾಲಿಗಾಗಿ ಮಂಡಿಸಲಾಗಿರುವ ಬಜೆಟ್ ಆಶಾದಾಯಕವಾಗೇನೂ ಇಲ್ಲ. ಬಜೆಟ್ನಲ್ಲಿ ಯಾವುದೇ ವಿಶೇಷ ಅಂಶಗಳೂ ಇಲ್ಲ. ಆಶಾಭಾವನೆ ಮೂಡಿಸುವ ರೀತಿಯಲ್ಲಿ ಬಜೆಟ್ ಇಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಿರಾಶಾದಾಯಕ : ಆರ್ಥಿಕ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಕೃಷ್ಣ ಅವರು ಮಂಡಿಸಿರುವ ಬಜೆಟ್ ನಿರಾಶಾದಾಯಕವಾಗಿದೆ. ಕಳೆದ ವರ್ಷದ ಬಜೆಟ್ನಲ್ಲಿ ಏನೇನು ಸಾಧನೆ ಮಾಡ್ತೇವೆ ಎಂದು ಹೇಳಲಾಗಿತ್ತೋ, ಅದನ್ನು ಕಾರ್ಯಗತ ಮಾಡುವಲ್ಲಿ ಸರಕಾರ ವಿಫಲವಾಗಿದೆ ಎಂದು ಪ್ರತಿಪಕ್ಷದ ನಾಯಕ ಡಿ.ಎಚ್. ಶಂಕರಮೂರ್ತಿ ಹೇಳಿದ್ದಾರೆ.
ರಾಷ್ಟ್ರದಲ್ಲಿಯೇ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ, ಈಗ ಮತ್ತೆ ತೆರಿಗೆ ಏರಿಕೆ ಮಾಡಲಾಗಿದೆ. ಇದರಿಂದ ರಾಜ್ಯದ ಜನತೆಯ ಮೇಲೆ ಹೆಚ್ಚುವರಿ ತೆರಿಗೆ ಹೊರೆ ಬೀಳಲಿದೆ ಎಂದು ಅವರು ಹೇಳಿದ್ದಾರೆ.