ಕರ್ನಾಟಕ 1200 ಕೋಟಿ ರುಪಾಯಿಗಳಷ್ಟು ಬಡಪಾಯಿ ಆಗಲಿದೆ!
ಬೆಂಗಳೂರು : ಆರ್ಥಿಕವಾಗಿ ಯೋಚನೆ ಮಾಡಿ ಹೆಜ್ಜೆ ಇಡುವ ಹಾಗೂ ದಕ್ಷ ಆಡಳಿತ ಹೊಂದಿರುವ ಕರ್ನಾಟಕ 11ನೇ ವಿತ್ತ ಆಯೋಗದ ಶಿಫಾರಸ್ಸುಗಳಿಂದ 1200 ಕೋಟಿ ರುಪಾಯಿಯಷ್ಟು ಬಡವಾಗಲಿದೆ ಎಂದು ಮುಖ್ಯಮಂತ್ರಿ ಕೃಷ್ಣ ವಿಷಾದಿಸಿದ್ದಾರೆ.
ತಮ್ಮ ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ತೀವ್ರ ಖೇದದಿಂದ ಈ ವಿಷಯ ವ್ಯಕ್ತಪಡಿಸಿದರು. ವಿತ್ತ ಆಯೋಗದ ಶಿಫಾರಸ್ಸಿನಿಂದ ಸುಂಕದ ರೂಪದಲ್ಲಿ ಬೊಕ್ಕಸ ತುಂಬುತ್ತಿದ್ದ ಹಣದ ಪ್ರಮಾಣದಲ್ಲಿ ತೀವ್ರ ಕಡಿತ ಉಂಟಾಗಿದೆ (5.33 ಪ್ರತಿಶತದಿಂದ 4.93 ಪ್ರತಿಶತಕ್ಕೆ). ಕರ್ನಾಟಕದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದೆ ಎಂದೇನೂ ಅಲ್ಲ. ಆದರೆ ನಾವು ಈಗ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಮುಂದೆ ಅದಕ್ಕೆ ದಂಡ ತೆರಬೇಕಾದೀತು. ಆರ್ಥಿಕವಾಗಿ ಬಹು ವರ್ಷಗಳಿಂದ ನಾವು ಎದುರಿಸುತ್ತಾ ಬಂದಿರುವ ತೊಂದರೆಗಳು ಹೆಚ್ಚುತ್ತಾ ಹೋದಲ್ಲಿ ರಾಜ್ಯದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಅಸಾಧ್ಯವಾಗುತ್ತದೆ ಎಂದರು.
ಆದಾಯದಲ್ಲಿ ಶೇ.60ರಷ್ಟು ಹಣ ಬಡ್ಡಿ ಕಟ್ಟಲು, ವೇತನ ಹಾಗೂ ಪಿಂಚಣಿ ನೀಡಲು ಖರ್ಚಾಗುತ್ತಿದೆ. ಇದನ್ನು ತಗ್ಗಿಸುವುದು ಅಸಾಧ್ಯವಾಗಿದೆ. ಸರ್ಕಾರಕ್ಕೆ ಇದೊಂದು ಡ್ರಾ ಬ್ಯಾಕ್. ಆದಾಯ ವ್ಯತ್ಯಯ ತಗ್ಗಿಸುವ ನಿಟ್ಟಿನಲ್ಲಿ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ವಿತ್ತ ಹೊಣೆಗಾರಿಕಾ ಮಸೂದೆಯನ್ನು ಜಾರಿಗೆ ತರಲಾಗುವುದು ಎಂದು ಕೃಷ್ಣ ಹೇಳಿದರು.
(ಯುಎನ್ಐ)