ಸಾಫ್ಟ್ವೇರ್ ಉತ್ಪಾದನೆ ಮೇಲೆ ಇದೇ ಮೊದಲ ಬಾರಿಗೆ ಶೇ.4ರಷ್ಟು ತೆರಿಗೆ
ಬೆಂಗಳೂರು : ಆರ್ಥಿಕ ಚೇತರಿಕೆಗೆ ಆದ್ಯತೆ. 2005ನೇ ಇಸವಿ ಒಳಗೆ ರಾಜ್ಯದ ಆರ್ಥಿಕ ಕೊರತೆ ನೀಗಿಸಲು ಕ್ರಮ. ಕೃಷಿ, ತೋಟಗಾರಿಕೆಗೆ ಆದ್ಯತೆ. ಅಭಿವೃದ್ಧಿಗೆ ಶೇ. 38ರಷ್ಟು ಹೆಚ್ಚಿನ ಅನುದಾನ. ಹೊಸ ಎರಡು ಸಾಫ್ಟ್ವೇರ್ ಪಾರ್ಕ್ ಸ್ಥಾಪನೆ. ನೀರಿನ ಗುಣಮಟ್ಟ ಕಾಪಾಡಲು ಕ್ರಮ. ಇದು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ 2001 - 02ನೇ ಸಾಲಿಗೆ ಮಂಡಿಸಿದ ರಾಜ್ಯ ಬಜೆಟ್ ಮುಖ್ಯಾಂಶ.
ಯುಗಾದಿಯ ಹಬ್ಬದ ಸಂಭ್ರಮದಲ್ಲೇ ಮುಖ್ಯಮಂತ್ರಿ ಸೋಮವಾರ ಮಂಡಿಸಿದ ಮುಂಗಡ ಪತ್ರದಲ್ಲಿ ಕೃಷಿಗೆ ಆದ್ಯತೆ ನೀಡಲಾಗಿದೆ. ಕೇವಲ ಸಾಫ್ಟ್ವೇರ್, ಮಾಹಿತಿ ತಂತ್ರಜ್ಞಾನದ ಗುಂಗಿನಲ್ಲಿ ರಾಜ್ಯದ ಪ್ರಗತಿ ಹಾಗೂ ರೈತರನ್ನು ಸಂಪೂರ್ಣವಾಗಿ ಕೃಷ್ಣ ಮರೆತಿದ್ದಾರೆ ಎಂಬ ಆರೋಪಕ್ಕೆ ಉತ್ತರ ನೀಡುವ ಪ್ರಯತ್ನವನ್ನು ಕೃಷ್ಣ ಮಾಡಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ನೀಗಿಸಲೂ ಈ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ. 2 ಲಕ್ಷ ನೀರಿನ ಮೂಲಗಳನ್ನು ಗುರುತಿಸಲಾಗಿದ್ದು, ಕಾರ್ಯ ಯೋಜನೆಯ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. 15 ಕೋಟಿ ರುಪಾಯಿ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ಪ್ರಸ್ತಾಪವನ್ನು ಮುಖ್ಯಮಂತ್ರಿ ಮಾಡಿದ್ದಾರೆ.
ಕೊಳವೆ ಬಾವಿಗಳನ್ನು ಹೆಚ್ಚು ಹೆಚ್ಚು ಕೊರೆದಿರುವ ಕಾರಣ ಅಂತರ್ಜಲ ಕ್ಷೀಣಿಸಿರುವ 72 ತಾಲೂಕುಗಳಲ್ಲಿ ಅಂತರ್ಜಲ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವ ಭರವಸೆಯೂ ದೊರೆತಿದೆ. ಇದಕ್ಕೆ 18 ಕೋಟಿ ರುಪಾಯಿಗಳ ಯೋಜನೆಯ ರೂಪುರೇಷೆ ನೀಡಲಾಗಿದೆ.
ಬಜೆಟ್ನ ಇನ್ನಷ್ಟು ಮುಖ್ಯಾಂಶಗಳು ಇಂತಿವೆ...
- ಸಾಫ್ಟ್ವೇರ್ ಮೇಲೆ ಇದೇ ಮೊದಲ ಬಾರಿಗೆ ಪ್ರತಿಶತ 4 ತೆರಿಗೆ ವಿಧಿಸಲಾಗಿದೆ
- ಈ ತೆರಿಗೆ ಹೇರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ 284 ಕೋಟಿ ರುಪಾಯಿ ತುಂಬಲಿದೆ
- ರೇಷ್ಮೆ ಬಟ್ಟೆ, ಸೀಮೆಎಣ್ಣೆ ಸ್ಟೋವ್, ಬೀಡಿ ಹಾಗೂ ಜವಳಿ ಮೇಲೆ ಶೇ. 2ರಷ್ಟು ತೆರಿಗೆ
- 2001- 02 ವಿತ್ತ ವರ್ಷದಲ್ಲಿ 23 ಸಾವಿರದ 232 ಕೋಟಿ ರುಪಾಯಿ ಸರ್ಕಾರದ ಬೊಕ್ಕಸ ತುಂಬಲಿದ್ದು, ಈ ಪೈಕಿ 17 ಸಾವಿರದ 328 ಕೋಟಿ ರುಪಾಯಿ ಆದಾಯ ತೆರಿಗೆ ರೂಪದಲ್ಲಿ ಬರಲಿದೆ. 5 ಸಾವಿರದ 904 ಕೋಟಿ ರುಪಾಯಿ ಬಂಡವಾಳದ ರೂಪದಲ್ಲಿ ತುಂಬಲಿದೆ. ವಿತ್ತೀಯ ವರ್ಷದಲ್ಲಿ ಒಟ್ಟಾರೆ ವೆಚ್ಚ 23 ಸಾವಿರದ 276 ಕೋಟಿ ರುಪಾಯಿ ಎಂದು ನಿರೀಕ್ಷಿಸಲಾದ್ದು, 43.74 ಕೋಟಿ ರುಪಾಯಿ ವ್ಯತ್ಯಯ ಉಂಟಾಗಲಿದೆ.
- ಆದಾಯದ ಮೂಲಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ 284 ಕೋಟಿ ರುಪಾಯಿ ವಾಣಿಜ್ಯ ತೆರಿಗೆ ರೂಪದಲ್ಲಿ 125 ಕೋಟಿ ರುಪಾಯಿ ಹೆಚ್ಚುವರಿ ಹಣ ಬೊಕ್ಕಸ ತುಂಬಲಿದೆ. ಸ್ಟಾಂಪ್ ಹಾಗೂ ರಿಜಿಸ್ಟ್ರೇಷನ್ ದರಗಳ ಮೂಲಕ 95 ಕೋಟಿ, ಮೋಟಾರು ವಾಹನಗಳ ಮೇಲಿನ ತೆರಿಗೆಯಿಂದ 54 ಕೋಟಿ ಹಾಗೂ ಅಬಕಾರಿ ಸುಂಕದ ಮೂಲಕ 10 ಕೋಟಿ ರುಪಾಯಿ ಹೆಚ್ಚು ಹಣ ಬೊಕ್ಕಸಕ್ಕೆ ಸೇರಲಿದೆ.