ಹಸುರು ಕಣದಲ್ಲಿ ಆತ್ಮವಿಶ್ವಾಸ ವರ್ಸಸ್ ಸೋಲುಂಡ ಗೆಲುವಿನ ಕುದುರೆ
* ರಾಮ್ ರಾಜ್
ಬೆಂಗಳೂರು : ಹಸುರು ತುಂಬಿ ಕಂಗೊಳಿಸುವ ಕ್ರೀಡಾಂಗಣ. ಅಲ್ಲಿ 40 ಸಾವಿರಕ್ಕೂ ಹೆಚ್ಚು ಅಭಿಮಾನಿಗಳ ಅಬ್ಬರದ ಪ್ರತಿಧ್ವನಿ. ಆತ್ಮವಿಶ್ವಾಸದಿದ ಬೀಗುತ್ತಿರುವ ಭಾರತ ಹಾಗೂ ಸೋತು ಸುಣ್ಣವಾಗಿರುವ ಗೆಲುವಿನ ಕುದುರೆ ಆಸ್ಟ್ರೇಲಿಯಾ ಭಾನುವಾರ ಸೆಣಸುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೀವಸಂಚಾರವಾಗಲಿದೆ.
ಸೀಮಿತ ಓವರ್ಗಳ ಐದು ಪಂದ್ಯಗಳ ಸರಣಿಯ ಶುರುವಾತ್ ಭಾನುವಾರ. ಮೊದಲ ಪಂದ್ಯ ಸಿಲಿಕಾನ್ ನಗರಿಯಲ್ಲಿ, ಅದೂ ಯುಗಾದಿ ಹಬ್ಬದಂದು ನಡೆಯುತ್ತಿರುವುದು ವಿಶೇಷ. ಒಂದು ವೇಳೆ ಈ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದರೆ, ಒಂದೇ ಸಾಲಿನಲ್ಲಿ 11 ಒನ್ ಡೇ ಗೆದ್ದಿರುವ ವಿಂಡೀಸ್ಗೆ ಸರಿ ಸಮಾನವಾಗಲಿದೆ. ಈಗಾಗಲೇ ಒಂದೇ ಸಾಲಿನಲ್ಲಿ ಅತಿ ಹೆಚ್ಚು ಟೆಸ್ಟ್ ಗೆದ್ದಿರುವ ತಂಡ ಎಂಬ ಖ್ಯಾತಿಗೆ ಪಾತ್ರವಾಗಿರುವ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಇಲ್ಲೂ ತನ್ನ ದಾಖಲೆ ಮೆರೆಯುವ ಗುರಿ ಇಟ್ಟುಕೊಂಡಿರುವುದರಲ್ಲಿ ಸಂಶಯವಿಲ್ಲ. ಆದರೆ ಸುಮಾರು 2 ವರ್ಷಗಳ ನಂತರ ಟೆಸ್ಟ್ ಸೋಲಿನ ರುಚಿ ಉಣಿಸಿರುವ ಭಾರತವೇ ಫೇವರೇಟ್ಸ್.
ಗಾಯಗೊಂಡಿರುವ ಗಿಲ್ಲೆಸ್ಪಿ ಆಡುತ್ತಿಲ್ಲ. ಬದಲಿಗೆ ಮೈಕೆಲ್ ಕ್ಯಾಸ್ಪ್ರೋವಿಜ್ ಚೆಂಡನ್ನು ಕೈಗೆತ್ತಿಕೊಳ್ಳುವರು. ಭಾರತದ ಪಾಲಿಗಿದು ವರದಾನ. ಅಂತಿಮ ಟೆಸ್ಟ್ನಲ್ಲಿ ಗಿಲ್ಲೆಸ್ಪಿ ವೇಗಕ್ಕೆ ಭಾರತದ ಮುಖ್ಯ ಬ್ಯಾಟ್ಸ್ಮನ್ನರು ತಡಕಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಹಾಗಂತ ಭಾರತಕ್ಕೆ ರಸ್ತೆ ಸಾಫ್ ಎಂದೇನೂ ಅಲ್ಲ. ಮೈಕೆಲ್ ಬೆವೆನ್ ಹಾಗೂ ಆ್ಯಂಡ್ರೂ ಸೈಮಂಡ್ಸ್ ಸೀಮಿತ ಪಂದ್ಯಗಳ ಸ್ಪೆಷಲಿಸ್ಟ್ಗಳು. ತಂಡಕ್ಕೆ ಬೆವೆನ್ ಅದೆಷ್ಟು ಪಂದ್ಯಗಳನ್ನು ಗೆದ್ದು ಕೊಟ್ಟಿದ್ದಾರೋ ಲೆಕ್ಕವೇ ಇಲ್ಲ. ಟೆಸ್ಟ್ನಲ್ಲಿ ಹರ್ಭಜನ್ಗೆ ಗಿಲ್ಕ್ರಿಸ್ಟ್ ಉತ್ತರ ಕೊಡಲಾಗದಿದ್ದರೂ, ಬೆಂಗಳೂರಿನದು ಡಿಫರೆಂಟ್ ಬಾಲ್ ಗೇಮ್. ಇಲ್ಲಿ ಗಿಲ್ಕ್ರಿಸ್ಟ್ ಆರಂಭಿಕ ಬ್ಯಾಟ್ಸ್ಮನ್. ಈಗ ಗಾಯಗೊಂಡಿರುವ ಹುಲಿ ಕೂಡ ಹೌದು !
ಭಾರತದ ಪರ ಶ್ರೀನಾಥ್ಗೆ ಇದೊಂದು ಕಮ್ ಬ್ಯಾಕ್ ಎನ್ನಬಹುದು. 1996ರಲ್ಲಿ ಬಲಭುಜದ ಶಸ್ತ್ರಚಿಕಿತ್ಸೆ ನಂತರ ಅವರು ಟೆಸ್ಟ್ ಆಟಗಾರರಾಗೇ ಉಳಿದುಬಿಟ್ಟಿದ್ದಾರೆ. ಆದರೆ ಬಹು ದಿನಗಳ ನಂತರ ಮತ್ತೆ ಒಂದು ದಿನದ ಪಂದ್ಯಕ್ಕೆ ಅವರ ಸೇರ್ಪಡೆ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಆದರೆ ಶ್ರೀನಾಥ್ ಎಷ್ಟರ ಮಟ್ಟಿಗೆ ಅದನ್ನು ನಿರ್ವಹಿಸುವರೋ ಕಾದು ನೋಡಬೇಕು. ಒಂದಂತೂ ನಿಜ- ಶ್ರೀನಾಥ್ ಆಗಮನ ಹರ್ಭಜನ್ ಹೊರೆಯನ್ನು ಸ್ವಲ್ಪ ಕಡಿಮೆ ಮಾಡಲಿದೆ.
ಟೆಸ್ಟ್ನಲ್ಲಿ ನೀರು ಕುಡಿಸಿದಂತೆ ಹರ್ಭಜನ್ ಇಲ್ಲೂ ಮಾಡುವುದು ಅಷ್ಟೇನೂ ಸುಲಭವಲ್ಲ. ನಾಲ್ಕೋ ಐದೋ ಸಿಕ್ಸರ್ ಇಡೀ ಫಾರ್ಮಿಗೇ ಸವಾಲೊಡ್ಡುವ ಭಯವಿದೆ. ಏನೇ ಆಗಲಿ, ಒಂದು ಪರಿಪೂರ್ಣ ಮನರಂಜನೆಯ ತುರುಸಿನ ಆಟ ನಿಮ್ಮ ಪಾಲಿಗೆ. ಆನಂದಿಸಿ.
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...