ವಸಂತನ ಸ್ವಾಗತಿಸಲು ಭೂರಮೆ ಸಜ್ಜು
ಬೆಂಗಳೂರು : ಋತುರಾಜ ವಸಂತನ ಸ್ವಾಗತಕ್ಕೆ ಭೂರಮೆ ಹಸಿರು ಸೀರೆಯನುಟ್ಟು, ಕೆಂಪು ರವಿಕೆಯ ತೊಟ್ಟು ಸಜ್ಜಾಗಿದ್ದರೆ, ಮೈಯೆಲ್ಲಾ ಹೂವನ್ನೇ ತುಂಬಿಕೊಂಡ ಗುಲ್ಮೊಹರ್ ಹೂಗಳು ಗಾಳಿಗೆ ಉದುರಿ ವಸಂತನಿಗೆ ರಂಗಿನ ರಂಗೋಲಿಯನ್ನೇ ಬರೆದಿವೆ.
ಮೈ ಮನಕ್ಕೆ ನವ ಚೈತ್ರನ್ಯ ನೀಡುವ ಚೈತ್ರ ಇನ್ನೇನು ಎರಡೇ ದಿನದಲ್ಲಿ ಹೊಸ ಉಲ್ಲಾಸದೊಂದಿಗೆ, ಹಬ್ಬದ ಸಡಗರದೊಂದಿಗೆ ಆಗಮಿಸಲಿದೆ. ಈ ಮಧ್ಯೆ ವಸಂತನನ್ನೂ, ಚೈತ್ರನನ್ನೂ ಬರಮಾಡಿಕೊಳ್ಳಲು, ವರುಣನೂ ಸಜ್ಜಾಗಿದ್ದಾನೆ. ದಕ್ಷಿಣ ಒಳನಾಡಿನ ಕೆಲವೆಡೆ ವರುಣ ಚದುರಿದಂತೆ ಮಳೆ ಸುರಿಸಿದ್ದಾನೆ. ಭೂಮಿ, ಪ್ರಕೃತಿ, ವರುಣರೆಲ್ಲಾ ಕಾರ್ಯೋನ್ಮುಖರಾದ ಮೇಲೆ ಸೂರ್ಯ ದೇವ ಸುಮ್ಮನಿರಲು ಸಾಧ್ಯವೇ, ತಾನೂ ತನ್ನ ಪ್ರತಾಪ ಮೆರೆಯುತ್ತಿದ್ದಾನೆ.
ಈ ಮಧ್ಯೆ ರಾಜ್ಯದಲ್ಲಿ ಗರಿಷ್ಠ ತಾಪಮಾನ ಕೆಲವು ಪ್ರದೇಶಗಳಲ್ಲಿ ಸಾಮಾನ್ಯ ಮಟ್ಟಕ್ಕಿಂತಲೂ ಕೊಂಚ ಬದಲಾಗಿತ್ತು. ಕನಿಷ್ಠ ತಾಪಮಾನದಲ್ಲೂ ಅಲ್ಪ ಬದಲಾವಣೆ ಇತ್ತು. ದಕ್ಷಿಣ ಒಳನಾಡಿನ ಕೆಲವು ಕಡೆ ಕನಿಷ್ಠ ಹಾಗೂ ಗರಿಷ್ಠ ತಾಪಮಾನ ಸಾಮಾನ್ಯ ಮಟ್ಟಕ್ಕಿಂತಲೂ ಹೆಚ್ಚಾಗೇ ಇತ್ತು.
ರಾಜ್ಯದ ಗರಿಷ್ಠ ತಾಪಮಾನ ರಾಯಚೂರಿನಲ್ಲಿ 40.4 ಡಿಗ್ರಿ ಹಾಗೂ ಕನಿಷ್ಠ ಬೆಳಗಾವಿ ವಿಮಾನ ನಿಲ್ದಾಣದಲ್ಲಿ 17.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಮುನ್ಸೂಚನೆಯ ಪ್ರಕಾರ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ. ಮುಂದಿನ 48 ಗಂಟೆಗಳ ಅವಧಿಯಲ್ಲಿ ರಾಜ್ಯದ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಗಳೇನೂ ಇರುವುದಿಲ್ಲ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡವಿದ್ದು, ಗರಿಷ್ಠ 34 ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರುವ ಸೂಚನೆ ಇದೆ.