ರಿಯಾಯ್ತಿ ಇಲ್ಲ , ರೈತರ ಪಂಪ್ಸೆಟ್ಗಳಿಗೆರಾತ್ರಿಯಿಡೀ ವಿದ್ಯುತ್!
ಬೆಂಗಳೂರು : ತಮಿಳುನಾಡು ಮಾದರಿಯಲ್ಲಿ ಕರ್ನಾಟಕದಲ್ಲೂ ರೈತರ ಪಂಪ್ ಸೆಟ್ಗಳಿಗೆ ರಾತ್ರಿ ವೇಳೆ ನಿರಂತರ ವಿದ್ಯುತ್ ಪೂರೈಸುವ ಪ್ರಸ್ತಾವನೆ ರಾಜ್ಯ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಇಂಧನ ಖಾತೆ ಸಹಾಯಕ ಸಚಿವ ವೀರಕುಮಾರ್ ಪಾಟೀಲ್ ಗುರುವಾರ ವಿಧಾನಸಭೆಯಲ್ಲಿ ಪ್ರಕಟಿಸಿದರು.
ಇನ್ನು ಹದಿನೈದು ದಿನಗಳಲ್ಲಿ ರೈತರ ಪಂಪ್ಸೆಟ್ಗಳಿಗೆ ರಾತ್ರಿಯಿಡೀ ನಿರಂತರ ವಿದ್ಯುತ್ ಪೂರೈಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಆದರೆ, ರಾಜ್ಯದಲ್ಲಿ ಭಾಗ್ಯಜ್ಯೋತಿ ಮತ್ತು ಕುಟೀರಜ್ಯೋತಿ ಸೇರಿದಂತೆ ಯಾವುದೇ ಯೋಜನೆಗಳಿಗೆ ಉಚಿತ ವಿದ್ಯುತ್ ಪೂರೈಸುವ ಉದ್ದೇಶ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರೈತರಿಗೆ ವಿದ್ಯುತ್ತನ್ನು ಉಚಿತವಾಗಿ ನೀಡಿ, ಆಗಾಗ ಲೋಡ್ ಶೆಡ್ಡಿಂಗ್ ಹೇರುವ ಬದಲು ಕಡಿಮೆ ದರದಲ್ಲಿಯೇ ನಿರಂತರ ವಿದ್ಯುತ್ ಒದಗಿಸಿ ಎಂದು ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ವಾಜಪೇಯಿ ಸಲಹೆ ಮಾಡಿದ ತಿಂಗಳಂತರದಲ್ಲಿ ರಾಜ್ಯ ಸರಕಾರ ಈ ನಿರ್ಧಾರ ಕೈಗೊಂಡಿದೆ.
ಪ್ರಸ್ತುತ ಹದಿನಾರು ಲಕ್ಷ ಮನೆಗಳಿಗೆ ಭಾಗ್ಯಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಸಾಲಿನ ಮುಂಗಡ ಪತ್ರದಲ್ಲಿ ಇನ್ನೂ ಎರಡು ಲಕ್ಷ ಕುಟುಂಬಗಳಿಗೆ ವಿದ್ಯುತ್ಸಂಪರ್ಕ ಕಲ್ಪಿಸುವುದಾಗಿ ಹೇಳಲಾಗಿತ್ತು. ಆದರೆ ಸರಕಾರ ಉಚಿತ ವಿದ್ಯುತ್ ವಿತರಣೆಯನ್ನು ನಿಲ್ಲಿಸಲಿರುವುದರಿಂದ ಮುಂಗಡ ಪತ್ರದಲ್ಲಿ ಘೋಷಿಸಲಾದ ಉಚಿತ ವಿದ್ಯುತ್ ಸಂಪರ್ಕ ಯೋಜನೆಗಳು ಜಾರಿಗೆ ಬರುವ ನಿರೀಕ್ಷೆ ಇಲ್ಲ.
ಕೇಂದ್ರ ವಿದ್ಯುತ್ ಸ್ಥಾವರದಿಂದ ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ ಪಡೆಯಲು ಸರಕಾರ ಯತ್ನಿಸಿದೆ. ಇನ್ನು ಮೂರು ವರ್ಷಗಳಲ್ಲಿ ರಾಜ್ಯ ವಿದ್ಯುತ್ ಸ್ಥಾವರಗಳು ಸಾಕಷ್ಟು ವಿದ್ಯುತ್ ಉತ್ಪಾದಿಸುವಷ್ಟು ಶಕ್ತವಾಗಲಿವೆ ಎಂದು ವೀರಕುಮಾರ್ ಪಾಟೀಲ್ ಹೇಳಿದರು.
(ಇನ್ಫೋ ವಾರ್ತೆ)